ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ವತಿಯಿಂದ ಮರ್ಹೂಮ್ ಮುಹಮ್ಮದ್ ಕುಂಜತ್ತಬೈಲು ರವರಿಗೆ ನುಡಿನಮನ

0

ಬೆಳ್ತಂಗಡಿ: ಅಖಿಲ ಭಾರತ ಬ್ಯಾರಿ ಪರಿಷತ್ ಮೈಕಾಲ ಮಹಿಳಾ ಘಟಕದ ವತಿಯಿಂದ ಇತ್ತೀಚೆಗೆ ಅಗಲಿದ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಹಾಗೂ ಅಖಿಲ ಭಾರತ ಬ್ಯಾರಿ ಪರಿಷತ್‌ನ ಹಿರಿಯ ಸದಸ್ಯರಾದ ಮುಹಮ್ಮದ್ ಕುಂಜತ್ತಬೈಲ್ ರವರಿಗೆ ಆನ್ಲೈನ್ ಮೂಲಕ ಸಭೆ ಸೇರಿ ನುಡಿನಮನವನ್ನು ಸಲ್ಲಿಸಿದರು.

ಕೇಂದ್ರೀಯ ಸಮಿತಿಯ ಅಧ್ಯಕ್ಷರೂ, ಮಹಿಳಾ ಘಟಕದ ಪ್ರಧಾನ ಸಲಹೆಗಾರರೂ ಆದ ಜನಾಬ್ ಯು. ಹೆಚ್. ಖಾಲಿದ್ ಉಜಿರೆರವರ ನಿರ್ದೇಶನದಂತೆ ನಡೆದ ಈ ಸಭೆಯಲ್ಲಿ ಶಮೀಮ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಮಾತನಾಡಿದ ಜನಾಬ್ ಯು. ಹೆಚ್. ಖಾಲಿದ್ ಉಜಿರೆ, ಮುಹಮ್ಮದ್ ಕುಂಜತ್ತಬೈಲ್‌ ರವರಿಗೆ ನುಡಿನಮನ ಸಲ್ಲಿಸಿ ಅವರು ಸರಳ ಜೀವನವನ್ನು ನಡೆಸಿದ ಸ್ಪೂರ್ತಿದಾಯಕ ವ್ಯಕ್ತಿ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಜನಾನುರಾಗಿದ್ದರು, ಹಕ್ಕು ಪತ್ರದ ಆಕಾಂಕ್ಷಿಗಳಿಗೆ ಅವರು ಫಲಾನುಭವಗಳನ್ನು ನೀಡುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಅವರು ಬಿಟ್ಟು ಹೋದ ಆದರ್ಶಗಳು ಸ್ಪೂರ್ತಿಯಾಗಲಿ ಎಂದು ಅವರು ಅಖಿಲ ಭಾರತ ಬ್ಯಾರಿ ಪರಿಷತ್‌ಗಾಗಿ ಸೇವೆ ಸಲ್ಲಿಸಿದ ಕ್ಷಣಗಳನ್ನು ನೆನಪಿಸಿಕೊಂಡರು.

ಅಖಿಲ ಭಾರತ ಬ್ಯಾರಿ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಜನಾಬ್ ಇಬ್ರಾಹಿಂ ನಡುಪದವು ಮಾತನಾಡಿ, ಅಗಲಿದ ಹಿರಿಯ ಸಲಹೆಗಾರರಾಗಿದ್ದ ಮುಹಮ್ಮದ್ ಕುಂಜತ್ತಬೈಲ್‌ರವರ ಸ್ಥಾನ ತುಂಬಲು ಅವರಿಂದ ಮಾತ್ರ ಸಾಧ್ಯ. ಸ್ವಾವಲಂಬಿ ಜೀವನ ನಡೆಸುತ್ತಿದ್ದ ಅವರು ಉತ್ತಮ ಭಾಷಣಕಾರರೂ ಕೂಡಾ ಆಗಿದ್ದರು. ಕಾರ್ಯಕ್ರಮದಲ್ಲಿ ಸಮಯಕ್ಕೆ ಬಹಳ ಸ್ಪಂದನೆ ಕೊಡುತ್ತಿದ್ದರು. ಮಹಿಳಾ ಘಟಕ ಸ್ಥಾಪನೆಗೆ ಸಮಿತಿ ಸಭೆಯಲ್ಲಿ ಪ್ರೋತ್ಸಾಹ ನೀಡುತ್ತಿದ್ದರು. ಅವರೊಂದಿಗೆ ಕಳೆದ ನಿಮಿಷಗಳು ಅವಿಸ್ಮರಣೀಯ ಎಂದರು.

ಮಹಿಳಾ ಘಟಕದ ಗೌರವಾಧ್ಯಕ್ಷೆ ಸಾಹಿತಿ ಹಫ್ಸಾ ಬಾನು ಬೆಂಗಳೂರು ಮರ್ಹೂಂ ಮುಹಮ್ಮದ್ ಕುಂಜತ್ತಬೈಲ್ ರವರ ಕುರಿತು ಮಾತನಾಡಿ, ಅವರ ವಿಯೋಗ ನಮ್ಮ ಪರಿಷತ್ತಿಗೆ ಮಾತ್ರವಲ್ಲದೆ ಬ್ಯಾರಿ ಸಮುದಾಯಕ್ಕೆ ತುಂಬಲಾರದ ನಷ್ಟ. ಅಖಿಲ ಭಾರತ ಬ್ಯಾರಿ ಪರಿಷತ್ತಿಗೆ ಆಧಾರವಾಗಿದ್ದ ಸ್ತಂಭವೊಂದು ಕಳಚಿದೆ. ಆ ಸ್ಥಾನವನ್ನು ಯಾರಿಂದಲೂ ತುಂಬಲು ಆಗದು. ಅಮೂಲ್ಯ ರತ್ನದ ಉಂಗುರದಲ್ಲಿ ಅದರ ರತ್ನ ಉದುರಿ ಹೋದಾಗ ಉಂಗುರ ಹೇಗೆ ಕಾಣುವುದೋ ಮರ್ಹೂಂ ಮುಹಮ್ಮದ್ ಕುಂಜತ್ತಬೈಲ್ ಅವರನ್ನು ಕಳೆದುಕೊಂಡು ಇಲ್ಲಿನ ಪರಿಸ್ಥಿತಿ ಈಗ ಆ ತರ ಆಗಿದೆ.

ಒಳ್ಳೆಯವರನ್ನು ಅಲ್ಲಾಹನು ಬೇಗ ಕರೆಸಿಕೊಳ್ಳುತ್ತಾನೆ ಮತ್ತು ರಮಲಾನಿನಲ್ಲಿ ಭಾಗ್ಯವಂತರಿಗೆ ಮರಣ ಬರುವುದೆಂದು ಹಿರಿಯರು ಹೇಳುವ ಮಾತಿದೆ ಅದನ್ನು ಮನನ ಮಾಡಿಕೊಂಡು ನಾವು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕಷ್ಟೇ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಮಹಿಳಾ ಘಟಕಾಧ್ಯಕ್ಷೆ ಶಮೀಮ ಕುತ್ತಾರ್ ಅವರು ಮಾತನಾಡಿ ಹಿರಿಯ ಬ್ಯಾರಿ ಚೇತನವೊಂದು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ಒಳಗಾಗಿದೆ. ಅಖಿಲ ಭಾರತ ಬ್ಯಾರಿ ಪರಿಷತ್‌ನ ಕುಟುಂಬದ ಕೊಂಡಿಯೊಂದು ಕಳಚಿದೆ. ಮಹಿಳಾ ಘಟಕದ ರಚನೆಗೆ ಸಕಾರಾತ್ಮಕ ಬೆಂಬಲವಿತ್ತಿದ್ದ ಅವರು ಸಾರ್ವಜನಿಕ ಕ್ಷೇತ್ರದಲ್ಲೂ ತಮ್ಮನ್ನು ಉತ್ತಮ ರೀತಿಯಲ್ಲಿ ತೊಡಗಿಸಿದ್ದರು. ಅವರ ಸರಳ, ಸ್ನೇಹಪರತೆಯ ವ್ಯಕ್ತಿತ್ವವನ್ನು ಸ್ಮರಿಸಿ ಅವರ ಪಾರತ್ರಿಕ ಜೀವನದ ಸಂತೋಷಕ್ಕಾಗಿ ಪ್ರಾರ್ಥಿಸಿ ನುಡಿನಮನವಿತ್ತರು. ಕಾರ್ಯಕಾರಿ ಸಮಿತಿ ಸದಸ್ಯೆ ರಮ್ಲತ್ ಕಿರಾಅತ್ ಪಠಿಸಿದರು.

ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಮೀಝ ಯಂ.ಬಿ ಸ್ವಾಗತಿಸಿದರು. ಘಟಕಾಧ್ಯಕ್ಷೆ ಶಮೀಮಾ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಉಪಾಧ್ಯಕ್ಷೆ ಅಸ್ಮತ್ ವಗ್ಗ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here