

ಬೆಳ್ತಂಗಡಿ: ‘ಪದ್ಮನಾಭ ಮಾಣಿಂಜರ ದಕ್ಷತೆ, ಪ್ರಾಮಾಣಿಕತೆ, ಶಿಸ್ತು ಎಲ್ಲರಿಗೂ ಅದರ್ಶವಾದುದು. ಅವರಿಗೆ ಬಡವರ ಬಗೆಗೆ ಅಪಾರ ಕಾಳಜಿ ಇತ್ತು. ಬಡತನದ ನೋವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಕಾರಣಕ್ಕಾಗಿಯೇ ಅವರು ಗುರುದೇವ ವಿದ್ಯಾ ಸಂಸ್ಥೆಯ ಪ್ರೇರಣಾ ಶಕ್ತಿಯಾಗಿದ್ದರು’ ಎಂದು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ನ ಸದಸ್ಯೆ ಪ್ರೀತಿತಾ ಧರ್ಮ ವಿಜೇತ್ ಹೇಳಿದರು.
ಅವರು ಮಾ. 21ರಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಈಚೆಗೆ ನಿಧನರಾದ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಇದರ ಉಪಾಧ್ಯಕ್ಷ ಪದ್ಮನಾಭ ಮಾಣಿಂಜರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.
‘ಒಂದು ವರ್ಷದ ಅವಧಿಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಕೆ.ವಸಂತ ಬಂಗೇರ ಉಪಾಧ್ಯಕ್ಷರರಾಗಿದ್ದ ಪದ್ಮನಾಭ ಮಾಣಿಂಜ ಎಂಬ ಸಂಸ್ಥೆಯ ಎರಡು ಆಧಾರ ಕಂಬಗಳನ್ನು ಕಳೆದುಕೊಂಡಿದ್ದೇವೆ. ಮಾಣಿಂಜರು ಕಾಲೇಜಿನ ಕಡೆಗೆ ಹೆಚ್ಚಾಗಿ ಬಾರದೇ ಇದ್ದರೂ ಕಾಲೇಜಿನ ಬಗೆಗೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಜನ ಸಾಮಾನ್ಯರ ಬಗ್ಗೆ, ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಅಪಾರವಾದುದು. ಮಿತಭಾಷಿಯಾಗಿದ್ದ ಅವರು ತನ್ನ ಕರ್ತವ್ಯದ ಬಗ್ಗೆ ಅಪಾರ ಶ್ರದ್ಧೆ ಬೆಳೆಸಿಕೊಂಡಿದ್ದರು. ಆಡಳಿತಾತ್ಮಕ ವಿಚಾರದಲ್ಲಿ ಅವರ ಅನುಭವ ಅನನ್ಯವಾದುದು’ ಎಂದರು.
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ, ‘ಪದ್ಮನಾಭ ಮಾಣಿಂಜರ ಕಾರ್ಯದಕ್ಷತೆ ಅದರ್ಶಯುತವಾದುದು. ಮಾಡುವ ಯಾವುದೇ ಕೆಲಸದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ತನ್ನ ಅಧಿಕಾರದ ಅವಧಿಯಲ್ಲಿ ಸಂಘದ ವತಿಯಿಂದ ಸುಮಾರು ₹ 20 ಲಕ್ಷ ಅಧಿಕವಾದ ವಿದ್ಯಾರ್ಥಿ ವೇತನ ನೀಡಿ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಗೆ ನೆರವಾಗುವ ಕಾರ್ಯವನ್ನು ಮಾಡಿದ್ದರು’ ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಸಮೀವುಲ್ಲಾ ಮಾತನಾಡಿ, ‘ಕಾಲೇಜಿನ ಆರಂಭದಲ್ಲಿ ಅವರ ಕಾಣಿಕೆ ಅಪಾರವಾದುದು. ಯಾವುದೇ ವಿಚಾರದಲ್ಲಿ ಸ್ಪಷ್ಟ ನಿಲುವು ಬೆಳೆಸಿಕೊಂಡವರು ಅವರು. ಕಾಲೇಜನ್ನು ಜಿಲ್ಲೆಯಲ್ಲಿ ಒಂದು ಮಾದರಿ ಕಾಲೇಜು ಮಾಡಬೇಕು ಎಂಬುದು ಅವರ ಕನಸಾಗಿತ್ತು’ ಎಂದರು
ಉಪನ್ಯಾಸಕರಾದ ಹರೀಶ್ ಪೂಜಾರಿ, ರಾಕೇಶ್ ಕುಮಾರ್ ಮಾತನಾಡಿದರು.
ಪದ್ಮನಾಭ ಮಾಣಿಂಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಸ್ವಾಗತಿಸಿ, ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಸತೀಶ್ ವಂದಿಸಿದರು.