ಬೆಳ್ತಂಗಡಿ: ಚರ್ಚ್ ರೋಡ್ ನಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ-ಆಕ್ರೋಶ

1

ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖೆಯಡಿ ನಿರ್ವಹಿಸುತ್ತಿರುವ ಬೆಳ್ತಂಗಡಿ ಸಿವಿಸಿ ಹಾಲ್ ಚರ್ಚ್ ರೋಡ್ ಬಳಿಯ ಎಸ್.ಸಿ. ಎಸ್.ಟಿ. ವಸತಿ ನಿಲಯ ಅವ್ಯವಸ್ಥೆಯಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಹಾಸ್ಟೆಲ್ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟಿಸಿದ ಘಟನೆ ನಡೆದಿದೆ.

ಅಂತಿಮ ವರ್ಷದ ಬಿ.ಎಡ್ ವಿದ್ಯಾರ್ಥಿನಿ ಅಕ್ಷತಾ ಎಂ., ಪ್ರಥಮ ವರ್ಷದ ಬಿ. ಎಡ್ ವಿದ್ಯಾರ್ಥಿನಿ ಮೇಘಾ ಡಿ. ಆರ್. ಹಾಗೂ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿನಿ ಅನುಷಾ ಬಿ. ಎಮ್. ಮಾತನಾಡಿ ಮೆನುವಿನಲ್ಲಿ ಹಾಕಿರುವ ಯಾವುದೇ ಆಹಾರ ಸರಿಯಾಗಿ ನೀಡುವುದಿಲ್ಲ. ಆಹಾರ ರುಚಿ ಇರುವುದಿಲ್ಲ. ಯಾವುದೇ ಕಾರ್ಯಕ್ರಮ ಜರಗುವುದಿಲ್ಲ. ಚಟುವಟಿಕೆಗಳು ಆಗಲಿ ಯಾವುದು ನಡೆಯುವುದಿಲ್ಲ. ಸ್ವಚ್ಛತಾ ವ್ಯವಸ್ಥೆ ಮತ್ತು ಸ್ನಾನದ ಕೊಠಡಿ ಹದಗೆಟ್ಟಿದೆ. ಭಾಷಾ ತಾರತಮ್ಯ ಹೆಚ್ಚಾಗಿದೆ. ನಮ್ಮ ಶೈಕ್ಷಣಿಕ ಚಟುವಟಿಕೆ ಚಟುವಟಿಕೆಗೆ ಯಾವುದೇ ರೀತಿಯ ಪ್ರೋತ್ಸಾಹ ದೊರೆಯುತ್ತಿಲ್ಲ. ಊರಿನವರು ಮತ್ತು ಹೊರಗಿನವರು ಎಂಬ ಭೇದ ಭಾವನೆ ನಡೆಯುತ್ತಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಸರ್ಕಾರ ನೀಡಿರುವ ಸಿಹಿ ತಿಂಡಿಗಳು ದೊರೆಯುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸುವ ಊಟದ ಭಾವಚಿತ್ರದಲ್ಲಿ ಕಳಪೆ ತಂತ್ರವನ್ನು ಉಪಯೋಗಿಸುತ್ತಿದ್ದಾರೆ. ಭಾವಚಿತ್ರದಲ್ಲಿ ತಲಾ ಮೂರರಂತೆ ಜಾಮೂನುಗಳನ್ನು ಹಾಕಿ ಮಕ್ಕಳ ತಟ್ಟೆಗೆ ತಲಾ ಎರಡರಂತೆ ಬಡಿಸುತ್ತಾರೆ. ಈ ತಿಂಗಳು ಮೊದಲ ವಾರದಲ್ಲಿ ಬಂದಂತೆ ಒಬ್ಬ ಅಧಿಕಾರಿ ಕೇವಲ ಹಾಸ್ಟೆಲ್ ಮುಂದೆ ನಿಂತು ಭಾವಚಿತ್ರ ತೆಗೆಸಿಕೊಂಡು ಹೋಗಿದ್ದಾರೆ. ಈ ಅಧಿಕಾರಿಯು ಮಕ್ಕಳ ತನಿಖೆ ನಡೆಸುವುದಿಲ್ಲ. ಸಾಂಸ್ಕೃತಿಕ ಚಟುವಟಿಕೆ ನಡೆಸಲು ನಿರ್ಮಿಸಿದ ಸಭಾಂಗಣದಲ್ಲಿ ಅಡುಗೆ ಸಿಬ್ಬಂದಿಯವರು ಹಾಗೂ ಅವರ ಮಕ್ಕಳಿಗೆ ಮಾತ್ರ ಒಗೆದ ಸಮವಸ್ತ್ರವನ್ನು ಒಣಗಿಸಲು ಅವಕಾಶ ನೀಡುತ್ತಾರೆ. ಉಳಿದ ಎಲ್ಲಾ ಮಕ್ಕಳು ಈ ಹಿಂದೆ ಇರುವ ಚಿಕ್ಕದಾದ ಜಾಗದಲ್ಲಿ ಬಟ್ಟೆ ಒಣಗಿಸಲು ಅವಕಾಶ ಕೊಟ್ಟು ತಾರತಮ್ಯ ಮಾಡುತ್ತಿದ್ದಾರೆ.

ಹಾಸ್ಟೆಲ್ ನಲ್ಲಿ ಸೊಳ್ಳೆಗಳ ಕಾಟ ತುಂಬಾ ಇದ್ದು ಇಲ್ಲಿಯವರೆಗೂ ಈ ವಿಷಯದ ಬಗ್ಗೆ ಮೇಲ್ವಿಚಾರಕರು ಸಮಾಜ ಕಲ್ಯಾಣ ಅಧಿಕಾರಿ ಅಥವಾ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಇವರ ಬೇಜವಾಬ್ದಾರಿಯಿಂದಾಗಿ ಕೆಲವು ವಿದ್ಯಾರ್ಥಿನಿಯರು ಮಾರಕ ಡೆಂಗ್ಯೂ ಕಾಯಿಲೆಯಿಂದ ಬಳಲಿದ್ದಾರೆ. ಮೇಲ್ವಿಚಾರಕರು ವಾರದಲ್ಲಿ ಮೂರು ದಿನ ಕೆಲಸಕ್ಕೆ ಭೇಟಿ ನೀಡಬೇಕಿದ್ದು ಇವರು ವಾರದಲ್ಲಿ ಒಂದು ದಿನ ಮತ್ತು ಎಷ್ಟೋ ವಾರಗಳಿಗೊಮ್ಮೆ ಭೇಟಿ ನೀಡಿದ್ದಾರೆ. ಸರಿಯಾಗಿ ಕಂಪ್ಯೂಟರ್ ವ್ಯವಸ್ಥೆ ಇರುವುದಿಲ್ಲ. ಅಡಿಗೆಯ ಸಿಬ್ಬಂದಿಯವರು ನಿಲಯದ ಕಚೇರಿಯಲ್ಲಿ ಕುಳಿತು ಫೋನಿನಲ್ಲಿ ಮಗ್ನರಾಗಿ ಇರುತ್ತಾರೆ.

ಈ ಹಿಂದೆ ಮೇಲ್ವಿಚಾರಕರ ಮೇಲೆ ಅವರ ಜವಾಬ್ದಾರಿ ಕುರಿತು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಈವರೆಗೂ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ವಿದ್ಯಾರ್ಥಿ ನಿಲಯಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಭೇಟಿ ನೀಡಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

1 COMMENT

  1. Good work. Same situation in other hostels in Belatangadi taluk. Hopefully Sudinews team visit all hostels & check the reality properly..

LEAVE A REPLY

Please enter your comment!
Please enter your name here