ಮೂಡುಬಿದಿರೆ: ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ ‘GIGGLE & GROW’ ಮಕ್ಕಳ ಆಟದ ಮನೆಯ ಉದ್ಘಾಟನೆ

0

ಮೂಡುಬಿದಿರೆ: ದಸರಾ ಹಬ್ಬದ ಶುಭಸಂದರ್ಭದಲ್ಲಿ ನವದುರ್ಗೆಯರ ಪ್ರತೀಕವಾದ 9 ಮಹಿಳಾ ಅತಿಥಿಗಳ ಉಪಸ್ಥಿತಿಯಲ್ಲಿ ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯ ನೂತನ ‘GIGGLE & GROW’ ಆಟದ ಮನೆಯ ಉದ್ಘಾಟನೆಯು ವಿಜೃಂಭಣೆಯಿಂದ ನೆರವೇರಿತು.

ನವದುರ್ಗೆಯರ ಕಲ್ಪನೆ ಭಾರತೀಯ ಪರಂಪರೆಯ ಅತೀ ವಿಶಿಷ್ಟವಾದ ಕೊಡುಗೆಗಳಲ್ಲಿ ಒಂದು. ದುರ್ಗಾದೇವಿಯ ಒಂಬತ್ತು ರೂಪಗಳನ್ನು 9 ದಿನಗಳ ಕಾಲ ಪ್ರತಿದಿನವೂ ಒಂದೊಂದು ಅರ್ಥದಲ್ಲಿ ಆಚರಿಸುವ ಪದ್ಧತಿ ದಸರಾ ಹಬ್ಬದ ವಿಶೇಷತೆಗಳಲ್ಲಿ ಒಂದು. ನಾರೀಶಕ್ತಿಯ ಪ್ರತೀಕವಾಗಿಯೂ ವಿಭಿನ್ನ ಹಾಗೂ ಸಾಂಕೇತಿಕ ಅರ್ಥದಲ್ಲಿ ಈ ಹಬ್ಬವನ್ನು ಆಚರಿಸುವುದುಂಟು. ಮಕ್ಕಳು ದೇವರ ಸ್ವರೂಪ. ಪುಟ್ಟ ಮಕ್ಕಳು ಆಡುತ್ತ, ನಲಿಯುತ್ತ ಬೆಳೆಯಬೇಕೆಂಬುದು ಹಿರಿಯರೆಲ್ಲರ ಅಭಿಲಾಷೆ. ಆ ಮಕ್ಕಳಿಗೆ ಹೇಗೆ ಮನೆಯಲ್ಲಿ ತಾಯಿಯ ರಕ್ಷಣೆ ಸಿಗುತ್ತದೋ ಹಾಗೆ ಅವರ ಆಟಪಾಠಗಳಲ್ಲಿ ಆ ಮಹಾತಾಯಿ ದುರ್ಗಾದೇವಿಯ ಅನುಗ್ರಹ ಪ್ರತಿದಿನವೂ ಪ್ರಾಪ್ತವಾಗುತ್ತಿರಬೇಕೆಂಬ ಸದಾಶಯದಿಂದ ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಮಕ್ಕಳ ಆಟದ ಮನೆ ‘GIGGLE & GROW’ ಇದರ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಉದ್ಘಾಟನೆಗೆ ಮೂಡುಬಿದಿರೆ ಪರಿಸರದಲ್ಲಿ ಮಹತ್ವದ ಸಾಧನೆಗಳಿಂದ ಗುರುತಿಸಿಕೊಂಡಿರುವ 9 ಶ್ರೇಷ್ಠ ಮಹಿಳೆಯರಾದ ಮೀನಾಕ್ಷಿ ನಾರಾಯಣ, ಮುನಾವರ, ಪ್ರಕಾಶಿನಿ ಹೆಗ್ಡೆ, ವೈಲೆಟ್ ಡಿ’ಸೋಜಾ, ಅಪೇಕ್ಷ ಪೂರ್ಣಚಂದ್ರ, ಬಿಂದ್ಯಾ ಶರತ್ ಶೆಟ್ಟಿ, ರಮ್ಯಾ ವಿಕಾಸ್, ಸರಿತಾ ಆಶೀರ್ವಾದ್, ಸಾರಿಕಾ ಬಂಗೇರ ಅವರನ್ನು ಆಹ್ವಾನಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಮಂಜುಳಾ ಅಭಯಚಂದ್ರ ಜೈನ್ ಆಗಮಿಸಿದ್ದರು . ಈ ಶುಭಾವಸರದಲ್ಲಿ ಮುಖ್ಯ ಅತಿಥಿಗಳನ್ನು ಹಾಗೂ 9 ಮಹಿಳಾ ಸಾಧಕಿಯರನ್ನು ಸಂಸ್ಥೆಯ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿ, ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ವಿನೂತನ ಪರಿಕಲ್ಪನೆಯೊಂದಿಗೆ ಇದನ್ನು ಅನುಷ್ಠಾನಕ್ಕೆ ತಂದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕರು, ಪ್ರಾಂಶುಪಾಲರು, ಶೈಕ್ಷಣಿಕ ಸಂಯೋಜಕರು ಹಾಗೂ ಸಿಬ್ಬಂದಿಗಳು, ಪುಟಾಣಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನೆಯ ಬಳಿಕ ಪುಟಾಣಿಗಳು ಆಟದ ಮನೆಯಲ್ಲಿ ವಿವಿಧ ಬಗೆಯ ಆಟಿಕೆಗಳಲ್ಲಿ ಆಡುವುದರ ಮೂಲಕ ಸಂತೋಷಪಟ್ಟರು . ಈ ಸುಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಿ.ಬಿ.ಎಸ್.ಇ ಸಂಸ್ಥೆಯು ಮಕ್ಕಳ ಆಟೋಟ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಸೌಕಾರ್ಯಗಳನ್ನು ನೀಡುತ್ತಾ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷರು ಮಾತನಾಡಿ ಒಬ್ಬ ವ್ಯಕ್ತಿ ಸಾಧನೆಯ ಗುರಿ ತಲುಪಬೇಕಾದರೆ ದೇವರ ಅನುಗ್ರಹ ಅತೀ ಅಗತ್ಯ. ಆ ನಿಟ್ಟಿನಲ್ಲಿ ನವರಾತ್ರಿಯ ಈ ಸುಸಂದರ್ಭದಲ್ಲಿ 9 ಮಹಿಳೆಯರಿಂದ ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿ ಅಕ್ಷತಾ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ್ ವಂದಿಸಿದರು.

LEAVE A REPLY

Please enter your comment!
Please enter your name here