ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಸೈನ್ಯಾಧಿಕಾರಿ, ತೇಜ ಕುಮಾರ ಕೊಂಡಾಲ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಕಾರ್ಗಿಲ್ ಕದನದ ಸಂದರ್ಭದಲ್ಲಿನ ಸನ್ನಿವೇಶಗಳನ್ನು ನೆನೆಯುತ್ತಾ, ದೇಶಕ್ಕಾಗಿ ಮಡಿದ ವೀರ ಯೋಧರು ತಮ್ಮ ಜೀವನವನ್ನು ತ್ಯಾಗ ಮಾಡಿ ನಮ್ಮ ನಾಳೆಯ ನೆಮ್ಮದಿಗಾಗಿ ಕಾರಣಕರ್ತರಾಗಿದ್ದಾರೆ.ಒಂದೆಡೆ ವಿಜಯೋತ್ಸವ ಆಚರಿಸುವೆವಾದರೆ ಮತ್ತೊಂದೆಡೆ ಮರಣವನ್ನಪ್ಪಿದ ವೀರ ಯೋಧರ ಮನೆಯಲ್ಲಿ ಸೂತಕದ ಛಾಯೆ. ನಮ್ಮ ಸಂಭ್ರಮದ ನಡುವೆಯೂ ಸೈನಿಕರ ತ್ಯಾಗ ಬಲಿದಾನದ ಗಾಥೆಯನ್ನು ಮಕ್ಕಳಿಗೆ ಸದಾ ಕಾಲ ತಿಳಿಸಿ ದೇಶಾಭಿಮಾನವನ್ನು ಮೂಡಿಸುವುದರ ಜೊತೆಗೆ ದೇಶಕ್ಕಾಗಿ ಶ್ರಮಿಸುವ ಸೇವಕರನ್ನು ತಯಾರುಗೊಳಿಸಬೇಕು ಎಂದು ತಿಳಿಸುತ್ತಾ ತಮ್ಮ ಜೀವನಾನುಭವವನ್ನು ಮಕ್ಕಳ ಮುಂದಿಟ್ಟರು.

ಬಳಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಎಕ್ಸೆಲ್ ವಿದ್ಯಾಸಂಸ್ಥೆಯು ಈಗಾಗಲೇ ದೇಶಕ್ಕಾಗಿ, ಸಮಾಜಕ್ಕಾಗಿ ಒಳ್ಳೆಯ ತರುಣ ಸಮಾಜವನ್ನು ಕೊಡುಗೆಯಾಗಿ ನೀಡುವಲ್ಲಿ ಶ್ರಮಿಸುತ್ತಿದೆ, ಇದರೊಂದಿಗೆ ದೇಶದ ಇತಿಹಾಸದ ಪುಟಗಳಲ್ಲಿ ನಮ್ಮ ವಿದ್ಯಾಸಂಸ್ಥೆಯ ಮಕ್ಕಳು ಅಜರಾಮರವಾಗಿ ಬೆಳೆಯಬೇಕು ಎಂಬ ದೂರದೃಷ್ಟಿಯನಿಟ್ಟುಕೊಂಡು ಎನ್.ಡಿ.ಎ ಪರೀಕ್ಷೆಗಳಲ್ಲಿ ಉತ್ತೀರ್ಣಗೊಳಿಸಿ ಸೈನ್ಯದತ್ತ ಮುಖಮಾಡುವಂತೆ ಮಾಡುತ್ತಿದೆ. ಇದರೊಂದಿಗೆ ದೇಶದ ಬಲಿದಾನದ ದ್ಯೋತಕವಾಗಿ ಮಕ್ಕಳಿಗೆ ಕಾರ್ಗಿಲ್ ದಿನಗಳ ಕಷ್ಟಕಾರ್ಪಣ್ಯಗಳನ್ನು ತಿಳಿಯಪಡಿಸುವ ಸದುದ್ದೇಶವನ್ನು ಹೊಂದಿಕೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅಭಿರಾಮ್ ಬಿ.ಎಸ್. ಆಡಳಿತ ಅಧಿಕಾರಿ ಕೀರ್ತಿನಿಧಿ ಜೈನ್, ಪ್ರಭಾರ ಪ್ರಾಂಶುಪಾಲರಾದ ಡಾ. ಪ್ರಜ್ವಲ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ, ಪ್ರಸನ್ನ, ರವಿ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಕಾರ್ಗಿಲ್ ಕದನದ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಮಾಡಲಾಯಿತು. ವಾಣಿಜ್ಯ ವಿಭಾಗದ ಮಕ್ಕಳಿಂದ ಕಾರ್ಯಕ್ರಮ ಸಂಯೋಜನೆ ಮಾಡಲಾಯಿತು.

LEAVE A REPLY

Please enter your comment!
Please enter your name here