

ಉಜಿರೆ: 12ನೇ ಶತಮಾನದಲ್ಲಿನ ಕುರುಡು ನಂಬಿಕೆ, ಗೊಡ್ಡು ಸಂಪ್ರದಾಯಗಳನ್ನು ತೊಲಗಿಸಿ, ತಮ್ಮ ಅನುಭವ ಮಂಟಪದ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಪ್ರತಿಪಾದಿಸಿದವರು ಬಸವಣ್ಣ.
ಬಸವ ಜಯಂತಿಯ ಆಚರಣೆಯ ಮೂಲಕ ನಾವೆಲ್ಲರೂ ಭಾರತೀಯತೆಯನ್ನು ಬೆಳೆಸಿಕೊಳ್ಳಬೇಕು. ಯಾವ ಧರ್ಮವು ಶ್ರೇಷ್ಠವಲ್ಲ, ಕನಿಷ್ಟವೂ ಅಲ್ಲ ಎಂಬುವುದನ್ನು ತಿಳಿದು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕೆಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಚನ ಕೆ.ವಿ.ಎಸ್.ಎಂ ಪ್ರೌಢಶಾಲೆ ಇಲ್ಲಿನ ಮುಖ್ಯೋಪಾಧ್ಯಾಯ ರಮೇಶ ಮಯ್ಯ ಇವರು ತಿಳಿಸಿದರು.
ಇವರು ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ಹಮ್ಮಿಕೊಂಡ ಬಸವ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ವಚನಗಳು ಇಂದಿಗೂ ಜೀವಂತ.ಇವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಸತ್ಯ, ನಡೆ, ನುಡಿ ಎಂಬ ಆದರ್ಶಗಳೊಂದಿಗೆ ಸರಳ ಜೀವನ ನಡೆಸಿದ ಬಸವಣ್ಣನವರು ಶಿಕ್ಷಕರಾದ ನಮಗೆಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ.ವ್ಯಕ್ತಿ ಬದ್ಧತೆ ಹಾಗೂ ನೀತಿಯುತ ಬದುಕು ಬಹುಮುಖ್ಯವೆಂದು ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ್ಹ ಅಭಿಪ್ರಾಯ ವ್ಯಕ್ತಪಡಿಸಿದರು.
ಇಡೀ ಜಗತ್ತಿಗೆ ತಮ್ಮ ಅನುಭವ ಮಂಟಪದ ಮೂಲಕ ಸಾಮಾಜಿಕ ಸುಧಾರಣೆ ಮಾಡಿದ ಭಕ್ತಿಭಂಡಾರಿ, ವಿಶ್ವಮಾನವ ಬಸವಣ್ಣ ನಮಗೆಲ್ಲರಿಗೂ ಪ್ರೇರಣೆ. ಇವರ ವಚನಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯೆಂದು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಯಾದ ಚಂದ್ರಶೇಖರ್ ಇವರು ಪ್ರಸ್ತಾವಿಕ ಮಾತುಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ವಿದ್ಯಾಶ್ರೀ ಪಿ ಹಾಜರಿದ್ದರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕೀರ್ತನ್ ಕುಮಾರ್ ಹಾಗೂ ಚೈತ್ರ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಾದ ದಿವ್ಯ ಸ್ವಾಗತಿಸಿ, ವಿನುತಾ ವಂದಿಸಿ, ದಾಕ್ಷಾಯಿಣಿ ಅತಿಥಿ ಪರಿಚಯ ಮಾಡಿದರು ಹಾಗೂ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.