ಜನಜಾಗೃತಿ ವೇದಿಕೆ ಆರ್ಥಿಕ ವರ್ಷದ ಪ್ರಥಮ ಸಭೆ- ನೂತನ ವರ್ಷದ ಕ್ರಿಯಾಯೋಜನೆಗೆ ಮಂಜೂರಾತಿ

0

ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ಬಲವರ್ಧನೆ, ನವಜೀವನ ಸಮಿತಿ ಸದಸ್ಯರಿಗೆ ಉದ್ಯೋಗ ಕೌಶಲ್ಯ ತರಬೇತಿ, ಕಿರುಚಿತ್ರ ಪ್ರದರ್ಶನದ ಮೂಲಕ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಕಾರ್ಯಾಚರಣೆ ವ್ಯಾಪ್ತಿಯೊಳಗಡೆ ಭಜನಾ ಪರಿಷತ್ ಗಳ ಸಂಯೋಜನೆ ಮೊದಲಾದ ಮಹತ್ವದ ಕ್ರಿಯಾಯೋಜನೆಗೆ ತಾಲೂಕು ಜನಜಾಗೃತಿ ವೇದಿಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಎಸ್‌ಡಿಎಂ ಪಿನಾಕಿ ಸಭಾಂಗಣದಲ್ಲಿ ಏ.23ರಂದು ನಡೆದ ಜನಜಾಗೃತಿ ವೇದಿಕೆಯ ಆರ್ಥಿಕ ವರ್ಷದ ಪ್ರಥಮ ಸಭೆಯಲ್ಲಿ ನೂತನ ವರ್ಷದ ಕ್ರಿಯಾಯೋಜನೆಗೆ ಮಂಜೂರಾತಿ ನೀಡಲಾಯಿತು.

ಅಧ್ಯಕ್ಷತೆಯನ್ನು ತಾ‌ ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ ವಹಿಸಿದ್ದರು.

ಅಕ್ಟೋಬರ್ ನಲ್ಲಿ ಉಜಿರೆ ವಲಯ ವ್ಯಾಪ್ತಿಯಲ್ಲಿ ಬೃಹತ್ ಮದ್ಯವರ್ಜನ ಶಿಬಿರ ಆಯೋಜನೆ, ವಲಯಕ್ಕೆ ಕನಿಷ್ಠ ಎರಡರಂತೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಆಯೋಜನೆ, ಹೊಸ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಮತ್ತು ಅವರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಾಗಾರ, ವಿಶ್ವ ತಂಬಾಕು ವಿರೋಧಿ ದಿನ ಹಾಗೂ ಅಂತಾರಾಷ್ಟ್ರೀಯ ಮಾಧಕ ದ್ರವ್ಯ ವಿರೋಧಿ ದಿನಾಚರಣೆ ಆಯೋಜನೆ, ತಾಲೂಕು ಕೇಂದ್ರದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಆಯೋಜನೆ, ನವಜೀವನ ಸಮಿತಿ ಸದಸ್ಯರ ಸಂಪರ್ಕ ಅಭಿಯಾನ ಮನೆ ಭೇಟಿ, ನೂತನ ಸಮಿತಿ ರಚನೆ, ನವಜೀವನ ಸಮಿತಿ ಸದಸ್ಯರಿಗೆ ರುಡ್‌ಸೆಟ್ ಸಹಕಾರದೊಂದಿಗೆ ಉದ್ಯೋಗ ಕೌಶಲ್ಯ ತರಬೇತಿ ಹಾಗೂ ಪ್ರಮಾಣ ಪತ್ರ, ಜೊತೆಗೆ ಆರ್ಥಿಕ ಸಹಕಾರ, ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಯೋಜನೆ, ಜೂನ್ ತಿಂಗಳಲ್ಲಿ ಗಿಡನಾಟಿ ಕಾರ್ಯಕ್ರಮ, ನವಜೀವನ ಸಮಿತಿ ಸದಸ್ಯರ ಯಶೋಗಾಥೆ ಸಂಗ್ರಹ, ಪಾನಮುಕ್ತರ ಆನ್ಲೈನ್ ಸಭೆಗೆ (ಗೂಗಲ್ ಮೀಟ್) ಮೂಲಕ ಸಂಜೆ 7 ರಿಂದ 8 ಗಂಟೆಯೊಳಗಡೆ ಅಭಿಪ್ರಾಯ ಹಂಚಿಕೆ ವೇದಿಕೆ, ಅದಕ್ಕೆ 20 ಸದಸ್ಯರನ್ನು ಸೇರ್ಪಡೆಗೊಳಿಸುವಿಕೆ, ಜನಜಾಗೃತಿ ವೇದಿಕೆಯ ಚಟುವಟಿಕೆಗೆ ಪೂರಕವಾಗಿ ಭಜನಾ ಪರಿಷತ್ ಗಳನ್ನು ವಲಯವಾರು ರಚಿಸಿಕೊಳ್ಳುವುದು, ಪಾನಮುಕ್ತ ಗ್ರಾಮಗಳ ನಿರ್ಮಾಣದ ಕಡೆಗೆ ಆದ್ಯತೆ ನೀಡುವುದು ಇವೇ ಮೊದಲಾದ ವಿಚಾರಗಳ ಬಗ್ಗೆ ವಿಮರ್ಷೆ ನಡೆದು ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಮಾಜಿ ಅಧ್ಯಕ್ಷರಾದ ಅಡೂರು ವೆಂಕಟ್ರಾಯ ಮತ್ತು ಕಿಶೋರ್ ಹೆಗ್ಡೆ ಸಲಹೆ ನೀಡಿದರು.

ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಕಾರ್ಯಕ್ರಮ ಅನುಷ್ಠಾನದಲ್ಲಿ ಲಭ್ಯವಿರುವ ಅನುದಾನ, ಮೌಲ್ಯಾಂಕನ ಮಾಡಿ ಬಹುಮಾನ ನೀಡುವ ವಿಚಾರ ಪ್ರಕಟಿಸಿದರು. ಜನಜಾಗೃತಿ ವೇದಿಕೆಯ ಕರಾವಳಿ ಪ್ರಾದೇಶಿಕ ನಿರ್ದೇಶಕ ಗಣೇಶ್ ಕ್ರಿಯಾಯೋಜನೆ ಮಂಡಿಸಿ ವಿವರಣೆ ನೀಡಿದರು.

ವಲಯವಾರು ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಯಿತು.ಗುರುವಾಯನಕೆರೆ ವಿಭಾಗದ ಯೋಜನಾಧಿಕಾರಿ ದಯಾನಂದ ಮತ್ತು ಬೆಳ್ತಂಗಡಿ ವಿಭಾಗದ ಯೋಜನಾಧಿಕಾರಿ ಸುರೇಂದ್ರ ಅನುಪಾಲನೆ ಮತ್ತು ವಾರ್ಷಿಕ ವರದಿ ಪ್ರಸ್ತುತಪಡಿಸಿದರು.

ಶೌರ್ಯ ವಿಪತ್ತು ನಿರ್ವಹಣೆ ವಿಭಾಗದ ಯೋಜನಾಧಿಕಾರಿ ಜಯವಂತ ಪಟಗಾರ ವಿಪತ್ತು ಸಾಧನಾ ವರದಿ ಮಂಡಿಸಿದರು.

ಪೂರ್ವಾಧ್ಯಕ್ಷರುಗಳಾದ ಡಿ.ಎ ರಹಿಮಾನ್, ಬೆಳಾಲು ತಿಮ್ಮಪ್ಪ ಗೌಡ, ಶೌರ್ಯ ವಿಪತ್ತು ವಿಭಾಗದ ಅಧಿಕಾರಿ ಕಿಶೋರ್ ಕಡಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಸುರೇಂದ್ರ ವಂದಿಸಿದರು.

LEAVE A REPLY

Please enter your comment!
Please enter your name here