ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಸರ್ಕಾರಿ ಶಾಲೆಯಲ್ಲಿ ಈಗ 180 ವಿದ್ಯಾರ್ಥಿಗಳು!, 1.10 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17ರಂದು ಲೋಕಾರ್ಪಣೆ

0

ಬೆಳ್ತಂಗಡಿ: 2019ರಲ್ಲಿ ಕೇವಲ 16 ಮಕ್ಕಳಿದ್ದು ಮುಚ್ಚುವ ಹಂತದಲ್ಲಿದ್ದ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೀಗ ಬರೋಬ್ಬರಿ 180 ಮಕ್ಕಳು ಓದುತ್ತಿದ್ದಾರೆ.ಈ ಮೂಲಕ ವಿದ್ಯಾರ್ಥಿಗಳ ಕೊರತೆಯಿಂದಾಗಿ ಇತಿಹಾಸದ ಪುಟ ಸೇರಬೇಕಿದ್ದ ಶಾಲೆಯೊಂದು ಹೊಸ ಇತಿಹಾಸ ನಿರ್ಮಿಸಿದೆ.

ಮುಚ್ಚುವ ಶಾಲೆಗೆ ಮರುಜೀವ ಸಿಕ್ಕಿತ್ತು: 65 ವರ್ಷಗಳ ಇತಿಹಾಸ ಹೊಂದಿರುವ ಕೂಕ್ರಬೆಟ್ಟು ಶಾಲೆ ನಾಲ್ಕು ವರ್ಷಗಳ ಹಿಂದೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿತ್ತು.1 ರಿಂದ 7ನೇ ತರಗತಿ ಹೊಂದಿರುವ ಶಾಲೆಯಲ್ಲಿ ಕೆಲವು ತರಗತಿಗಳು ಮಕ್ಕಳಿಲ್ಲದೆ ಖಾಲಿಯಿದ್ದವು.ಈ ಹಂತದಲ್ಲಿ ಹಳೆವಿದ್ಯಾರ್ಥಿಗಳು ಶಾಲೆಯಲ್ಲಿ ಸಭೆ ಸೇರಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅವರನ್ನು ಸಂಪರ್ಕಿಸಿ ಶಾಲೆಗೆ ಆಹ್ವಾನಿಸಿದ್ದರು.ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡಿನಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ ನೀಡಿದ್ದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಪ್ರಕಾಶ್ ಅಂಚನ್ ಅವರು 2019 ಫೆಬ್ರವರಿ 2 ರಂದು ತಮ್ಮ ತಂಡದೊಂದಿಗೆ ಮರೋಡಿಗೆ ಧಾವಿಸಿದ್ದರು.ಗ್ರಾಮದ ಮನೆಮನೆಗೆ ಖುದ್ದಾಗಿ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದ್ದರು.ಮಾತ್ರವಲ್ಲ ಅಂದು ಶಾಲೆಯಲ್ಲೇ ವಾಸ್ತವ್ಯ ಹೂಡಿ ಶಾಲೆ ಈ ಸ್ಥಿತಿಗೆ ತಲುಪಲು ಕಾರಣವಾದ ಅಂಶ ಮತ್ತು ಉಳಿಸಲು ಮಾಡಬೇಕಾದ ಯೋಜನೆ ರೂಪಿಸಿದ್ದರು.ಮರುದಿನ ಶಾಲೆಯಲ್ಲಿ ಗ್ರಾಮಸ್ಥರ ಸಭೆ ಕರೆದು ಶಾಲೆಯನ್ನು ಉಳಿಸಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿ ಸ್ಥಳೀಯವಾಗಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯನ್ನು ರಚಿಸಲಾಯಿತು.ಇದೇ ಸಭೆಯಲ್ಲಿ 40ಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಯಿಂದ ಕೂಕ್ರಬೆಟ್ಟು ಶಾಲೆಗೆ ದಾಖಲಿಸುವ ಭರವಸೆ ನೀಡಿದರು.ಈ ಮೂಲಕ ಮುಚ್ಚಬೇಕಿದ್ದ ಶಾಲೆಗೆ ಶಾಲೆಗೆ ಮರುಜೀವ ದೊರಕಿತ್ತು.

ನಂತರದಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಣಾಭಿಮಾನಿಗಳು, ಜನಪ್ರತಿನಿಧಿಗಳು, ದಾನಿಗಳು ಮತ್ತು ಮಕ್ಕಳ ಪೋಷಕರ ಪ್ರಯತ್ನದಿಂದ ಹಂತಹಂತವಾಗಿ ಶಾಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಈ ಹಿಂದೆ ಮರೋಡಿಯ ಒಂದು ಭಾಗಕ್ಕಷ್ಟೇ ಸೀಮಿತವಾಗಿದ್ದ ಈ ಶಾಲೆಯಲ್ಲಿ ಇಂದು ಮರೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಪೆರಾಡಿ, ಕಾಶಿಪಟ್ಣ, ಕೊಕ್ರಾಡಿ, ಸಾವ್ಯ, ಕುತ್ಲೂರು, ನಾರಾವಿ, ಶಿರ್ತಾಡಿ ಮತ್ತಿತರ ಗ್ರಾಮಗಳ ಮಕ್ಕಳು ಕಲಿಯುತ್ತಿದ್ದಾರೆ. ನಂತರದಲ್ಲಿ ಶಾಲೆಯನ್ನು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನಿಂದ ದತ್ತು ಪಡೆಯಲಾಯಿತು. ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಯಿತು. ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ಪಡೆಯಲಾಯಿತು.

ಶಾಲೆಗೆ ಬೇಕಾದ ಹೆಚ್ಚುವರಿ ಗೌರವ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. ಜತೆಗೆ ಶಾಲೆಯಲ್ಲಿ ಯೋಗ, ಕರಾಟೆ, ನೃತ್ಯ, ಯಕ್ಷಗಾನ ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಯಿತು. ಶ್ರೀದುರ್ಗಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲಾ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ದಾನಿಗಳ ನೆರವಿನಿಂದ ಶಾಲೆಗೆ ಬೇಕಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಇದರ ಫಲವಾಗಿ ಶಾಲೆಯಲ್ಲಿ 2020ರ ವೇಳೆಗೆ ಮಕ್ಕಳ ಸಂಖ್ಯೆ 80ಕ್ಕೆ ಏರಿದರೆ, 2021ಕ್ಕೆ 120ಕ್ಕೆ ಹೆಚ್ಚಾಗಿದೆ. ಅಂತೆಯೇ 2022ರಲ್ಲಿ 140 ದಾಟಿದರೆ, 2023ರಲ್ಲಿ 180 ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ.ಶಾಲೆಯಲ್ಲಿ ಪ್ರಸ್ತುತ ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರು ಖಾಯಂ ಶಿಕ್ಷಕಿಯರು, ಮೂರು ಅತಿಥಿ ಶಿಕ್ಷಕಿಯರು ಮತ್ತು ಮೂವರು ಗೌರವ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ಮಾರ್ಟ್ ಕ್ಲಾಸ್ ಸೌಲಭ್ಯ: ಹಳ್ಳಿಯ ಮಕ್ಕಳಿಗೂ ಡಿಜಿಟಲ್ ಶಿಕ್ಷಣ ಸಿಗುವ ಉದ್ದೇಶದಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಐಇಇಇ ಅಡ್ವಾನ್ಸಿಂಗ್ ಟೆಕ್ನಾಲಜಿ ಫಾರ್ ಹ್ಯೂಮಾನಿಟಿ ಸಂಸ್ಥೆಯಿಂದ ಕೂಕ್ರಬೆಟ್ಟು ಶಾಲೆಗೆ ಸುಮಾರು 2.40 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ. ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 2 ಲಕ್ಷ ಒದಗಿಸಲಾಗಿದೆ.

ಶಾಲೆಯ ಇತಿಹಾಸ: ಕುಕ್ಕೇರಬೆಟ್ಟು ಮನೆಯಲ್ಲಿ 1959 ಆಗಸ್ಟ್ ೧ರಂದು ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತು.ಆರಂಭದಲ್ಲಿ 33 ಮಕ್ಕಳು ದಾಖಲಾತಿಗೊಂಡರು.ವರ್ಷದಿಂದ ವರ್ಷಕ್ಕೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ, ಊರ ಪ್ರಮುಖರ ಸಹಕಾರದಲ್ಲಿ ಕೂಕ್ರಬೆಟ್ಟು ಎಂಬಲ್ಲಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣಗೊಂಡಿತು.1995-96ರ ವೇಳೆಗೆ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು.ಎಂಟು ನೂರಕ್ಕೂ ಅಧಿಕ ಮಂದಿ ಈ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಫೆ.17ರಂದು ಕಟ್ಟಡ ಲೋಕಾರ್ಪಣಾ ಸಮಾರಂಭ-ಸಾಂಸ್ಕೃತಿಕ ವೈಭವ: ಶಾಸಕ ಹರೀಶ್ ಪೂಂಜ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅನುದಾನದಿಂದ ಸುಮಾರು 1.10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಕ್ರೂಕ್ರಬೆಟ್ಟು ಸರ್ಕಾರಿ ಶಾಲೆಯ ಕಟ್ಟಡದ ಲೋಕಾರ್ಪಣಾ ಸಮಾರಂಭ ಮತ್ತು ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವ ಫೆ.17ರಂದು ನಡೆಯಲಿದೆ.

LEAVE A REPLY

Please enter your comment!
Please enter your name here