ಧರ್ಮಸ್ಥಳ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮಾರ್ಗದರ್ಶನ- ದಕ್ಷ ನಾಯಕತ್ವ ಗುಣದೊಂದಿಗೆ ತಮ್ಮ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕು-ಡಾ.ಡಿ.ವೀರೇಂದ್ರ ಹೆಗ್ಗಡೆ

0

ಉಜಿರೆ: ಎಂಜಿನಿಯರಿಂಗ್ ಪದವೀಧರರು ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಯೊಂದಿಗೆ ದಕ್ಷ ನಾಯಕತ್ವ ಗುಣ ಬೆಳೆಸಿಕೊಂಡು ತಮ್ಮ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಡಿ.2ರಂದು ಉಜಿರೆ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಸ್ವಾಗತಿಸಿ, ಹಿತವಚನ ನೀಡಿದರು.ಎಂಜಿನಿಯರಿಂಗ್ ಕಲಿತವರು ಸೃಜನಶೀಲ ಚಿಂತನೆಯೊಂದಿಗೆ ನೂತನ, ಆಕರ್ಷಕ ವಿನ್ಯಾಸಗಳನ್ನು ರೂಪಿಸಬೇಕು. ಕಠಿಣ ಪರಿಶ್ರಮ, ತಾಳ್ಮೆ, ಸಹನೆ ಮತ್ತು ಮುಕ್ತ ಮನಸ್ಸಿನಿಂದ ಇತರರನ್ನೂ ಪ್ರೀತಿ-ವಿಶ್ವಾಸದಿಂದ ಗೌರವಿಸಿದರೆ ಉನ್ನತ ಸಾಧನೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ, ಸಮಾಜಕ್ಕೆ ವಿಶೇಷ ಕೊಡುಗೆ ನೀಡಿ ಉತ್ಕೃಷ್ಟತೆ ಸಾಧಿಸಬೇಕು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರಿಗೆ ಎಲ್ಲೆಲ್ಲೂ ವಿಶೇಷ ಮಾನ್ಯತೆ, ಗೌರವ ಇದೆ.

ಇಲ್ಲಿ ಕಲಿತವರು ತಮ್ಮ ಕಾರ್ಯಕ್ಷೇತ್ರದಲ್ಲಿ ಹಾಗೂ ಸಮಾಜದಲ್ಲಿ ಎಸ್.ಡಿ.ಎಂ. ಸಂಸ್ಥೆಗಳ ರಾಯಭಾರಿಗಳಾಗಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಎಸ್.ಡಿ.ಎಂ. ಸಂಸ್ಕೃತಿಯನ್ನು ಪಸರಿಸಬೇಕು ಎಂದು ಅವರು ಸಲಹೆ ನೀಡಿದರು.

ಈಗ ಮಹಿಳಾ ಸಬಲೀಕರಣವಾಗುತ್ತಿದ್ದು, ಯುವತಿಯರು ಕೂಡಾ ಸ್ವಾವಲಂಬಿಗಳಾಗಿ ಉನ್ನತ ಸಾಧನೆ ಮಾಡಬೇಕು ಎಂದು ಹೆಗ್ಗಡೆಯವರು ತಿಳಿಸಿದರು.ಕಾಲೇಜಿನಲ್ಲಿ ಸಿಗುವ ಎಲ್ಲಾ ಸೌಲಭ್ಯ-ಸವಲತ್ತುಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ  ಕಾರ್ಯದರ್ಶಿ ಎಸ್.ಸತೀಶ್ಚಂದ್ರ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಶೋಕ ಕುಮಾರ್, ಟಿ., ಸ್ವಾಗತಿಸಿದರು. ಪ್ರಾಧ್ಯಾಪಕ ರವೀಶ್ ಧನ್ಯವಾದವಿತ್ತರು.ಕುಮಾರಿ ಪೂರ್ಣಿಮಾ ಜೈನ್ ಮತ್ತು ಲಾರೈನ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here