ಕುತ್ಲೂರಿನ ಪೂಂಜಾಜೆಯ ಜೋಸಿ ಆಂಟೋನಿ ಮನೆಗೆ ಬಂದದ್ದು ನಕ್ಸಲರು ಅಲ್ಲ- ಮನೆಗೆ ಬಂದದ್ದು ಮೂಡಬಿದ್ರೆ ಪೊಲೀಸರು- ಸರ್ಕಲ್ ಇನ್ಸ್ಪೆಕ್ಟರ್ ತನಿಖೆಯಲ್ಲಿ ಬಹಿರಂಗ

0

ಬೆಳ್ತಂಗಡಿ: ಪೊಲೀಸರು ಮನೆಗೆ ಭೇಟಿ ನೀಡಿದ್ದನ್ನು ನಕ್ಸಲರು ಎಂದು ಭಾವಿಸಿದ ಮನೆಯವರು ಬೇಸ್ತು ಬಿದ್ದ ಘಟನೆ ಕುತ್ಲೂರಿನಲ್ಲಿ ನಡೆದಿದೆ.ನ.21ರಂದು ರಾತ್ರಿ ವೇಳೆ ತಮ್ಮ ಮನೆಗೆ ಐದು ಜನ ಅಪರಿಚಿತರ ತಂಡವೊಂದು ಬಂದಿದೆ. ಮನೆಯ ಬಾಗಿಲು ಬಡಿದು ಈ ತಂಡ ವಿಚಾರಿಸಿದೆ.ಈ ತಂಡದಲ್ಲಿ ಮಹಿಳೆಯೊಬ್ಬರೂ ಇದ್ದರು. ಇದು ನಕ್ಸಲರ ತಂಡ ಆಗಿರಬಹುದು ಎಂದು ನಕ್ಸಲ್ ಪೀಡಿತ ಕುತ್ಲೂರು ಗ್ರಾಮದ ಪೂಂಜಾಜೆ ಮನೆಯ ಜೋಸಿ ಆಂಟೋನಿ ಮತ್ತು ಮಂಜುಳಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬ್ಲೂ ಬಣ್ಣದ ಡ್ರೆಸ್ ಹಾಕಿದ ನಾಲ್ಕು ಮಂದಿ ಪುರುಷರು ಮತ್ತು ಪೊಲೀಸ್ ಡ್ರೆಸ್ ಹಾಕಿದ ಒಬ್ಬರು ಮಹಿಳೆ ಮನೆಗೆ ಎಂಟ್ರಿಯಾಗಿ ಬಾಗಿಲು ಬಡಿದ್ದಾರೆ. ಯಾರು ಅಂತ ಕೇಳಿದಾಗ ನಾವು ಪೊಲೀಸರು ಬಾಗಿಲು ತೆಗೆಯಿರಿ ಮಾತನಾಡಲು ಇದೆ ಎಂದು ತಂಡದಲ್ಲಿದ್ದವರು ಹೇಳಿದ್ದಾರೆ. ಆದರೆ ನಾವು ಬಾಗಿಲು ತೆಗೆಯದೆ ವೇಣೂರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೇಳಿದ್ದೇವೆ.ಆಗ ವೇಣೂರು ಪೊಲೀಸರು ನಮ್ಮ ಪೊಲೀಸರು ಅಲ್ಲಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

ತಕ್ಷಣ ನಾವು 112 ಕಂಟ್ರೋಲ್ ರೂಂಗೆ ಕರೆ ಮಾಡಿ ವಿಚಾರ ತಿಳಿಸಿದ್ದೆವು.ಬಳಿಕ ತಂಡದಲ್ಲಿದ್ದ ಐವರೂ ಅಲ್ಲಿಂದ ತೆರಳಿದ್ದಾರೆ ಎಂದು ಜೋಸಿ ಆಂಟೋನಿ ಅವರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಘಟನೆಯ ಮಾಹಿತಿ ಪಡೆದ ಕೂಡಲೇ ೧೧೨ರ ಸಿಬ್ಬಂದಿಗಳು, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ಮತ್ತು ವೇಣೂರು ಪೊಲೀಸ್ ಠಾಣೆಯ ಸಬ್‌ಇನ್ಸೆಕ್ಟರ್ ಶ್ರೀಶೈಲಾ ಹಾಗೂ ತಂಡದ ಪೊಲೀಸರು ಪೂಂಜಾಜೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ರಾತ್ರಿ 2 ಗಂಟೆಗೆ ವಾಪಸ್ ಹೋಗಿರುವ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ಹಾಗೂ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಶ್ರೀಶೈಲಾ ಹಾಗೂ ತಂಡದವರು ಮನೆಗೆ ಬಂದ ಐದು ಜನರ ತಂಡದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಇಲ್ಲಿಗೆ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ವಿಚಾರ ಆತಂಕ ಸೃಷ್ಠಿಸಿತ್ತು. ಆದರೆ, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ತಂಡದವರು ವಿಚಾರಣೆ ನಡೆಸಿದಾಗ ಈ ಮನೆಗೆ ಬಂದವರು ನಕ್ಸಲರು ಅಲ್ಲ. ಘಟನೆಯೊಂದರ ಮಾಹಿತಿ ಪಡೆಯಲು ಮೂಡಬಿದ್ರೆ ಪೊಲೀಸರು ಆ ಮನೆಗೆ ಭೇಟಿ ನೀಡಿದ್ದರು ಎಂಬ ಅಂಶ ಬಯಲಾಗಿದೆ.

LEAVE A REPLY

Please enter your comment!
Please enter your name here