ಧರ್ಮಸ್ಥಳ ಶ್ರೀ ಮಂ.ಅ.ಪ್ರೌ.ಶಾಲೆಯಲ್ಲಿ ಭಾಷಾ ವಿಷಯದ ಶಿಕ್ಷಕರುಗಳ ಕಾರ್ಯಾಗಾರ-ನಮ್ಮ ಜ್ಞಾನದಿಂದ ನಮ್ಮ ಸುತ್ತಲಿನ ಪ್ರದೇಶದಲ್ಲಿ ವಿವೇಕದ ಬಣ್ಣ ಬಳಿಯೋಣ: ಬಿ.ಸೋಮಶೇಖರ ಶೆಟ್ಟಿ

0

ಧರ್ಮಸ್ಥಳ: “ಜ್ಞಾನವೆಂಬುದು ಡಬ್ಬದಲ್ಲಿರುವ ಬಣ್ಣದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯುವುದು. ಡಬ್ಬದಲ್ಲೇ ಇದ್ದರೆ ಅದರಿಂದ ಏನು ಪ್ರಯೋಜನವಿಲ್ಲ. ನಮ್ಮ ಜ್ಞಾನದಿಂದ ನಮ್ಮ ಸುತ್ತಲಿನ ಪ್ರದೇಶದಲ್ಲಿ ವಿವೇಕವೆಂಬ ಬಣ್ಣವನ್ನ ಬಳಿದಾಗ ಬದುಕು ಸಾರ್ಥಕತೆಯನ್ನು ಕಾಣುತ್ತದೆ.ಅಧ್ಯಾಪಕರು ಹೃದಯದಿಂದ ಹೃದಯಕ್ಕೆ ಸಂಧಿಸಿ ಪಾಠದ ಅಧ್ಯಯನ, ಅಧ್ಯಾಪನವನ್ನು ಮಾಡಬೇಕು.ಅವರ ನಿರಂತರ ಅಧ್ಯಯನ ಶೀಲತೆ ಅವರನ್ನು ಒಬ್ಬ ಯಶಸ್ವಿ ಅಧ್ಯಾಪಕನನ್ನಾಗಿ ಮಾಡಬಹುದು.ಅಧ್ಯಾಪಕರು ಹೊಸತನಕ್ಕೆ, ನಾವಿನ್ಯತೆಗೆ ತಮ್ಮನ್ನು ತಾವು ತೆರೆದುಕೊಂಡು, ಜ್ಞಾನದ ಹರಿವನ್ನು ವಿದ್ಯಾರ್ಥಿಗಳಲ್ಲಿ ವಿಸ್ತರಿಸುವ ಕಾರ್ಯವನ್ನು ಮಾಡಬೇಕು” ಎಂದು ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ.ಸೋಮಶೇಖರ ಶೆಟ್ಟಿ ಇವರು ಹೇಳಿದರು.

ಅವರು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ 9 ಮತ್ತು 10ನೇ ತರಗತಿಗಳ ‘ಭಾಷಾ ವಿಷಯದ ಶಿಕ್ಷಕರುಗಳ ಕಾರ್ಯಾಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಮುಖ್ಯ ಶಿಕ್ಷಕಿ ಪರಿಮಳ ಇವರು ಕಾರ್ಯಾಗಾರದ ರೂಪುರೇಷೆಯನ್ನು ನೀಡಿದರು.ಬೋಧನೆಯಲ್ಲಿ ಚಟುವಟಿಕೆ ಸಹಿತ ಬೋಧನೆಯ ಮಹತ್ವವನ್ನು ತಿಳಿಯಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಎನ್.ಪದ್ಮರಾಜ್ ಇವರು ತರಗತಿಯನ್ನು ಆಕರ್ಷಕಗೊಳಿಸಲು ಚಟುವಟಿಕೆ ಆಧಾರಿತ ತರಬೇತಿ ಕಾರ್ಯಕ್ರಮಗಳು ಅನಿವಾರ್ಯ ಮತ್ತು ಇಂದಿನ ದಿನದಲ್ಲಿ ಕೋಣೆಯೊಳಗಿನ ತರಗತಿ ವಿದ್ಯಾರ್ಥಿಗಳಿಗೆ ಆಕರ್ಷಕವಾಗಲು ಹೊಸತನ ಅನಿವಾರ್ಯ ಎಂದರು.

ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ಸುಮಾರು 30 ಶಿಕ್ಷಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು.ಆಂಗ್ಲ ಮಾಧ್ಯಮ ಧರ್ಮಸ್ಥಳದ ದಿವ್ಯ ಇವರು ಕನ್ನಡ ಭಾಷೆಯಲ್ಲಿ ಮಾದರಿ ತರಗತಿಯನ್ನು ನೀಡಿದರು.

ಶಾಲಾ ಶಿಕ್ಷಕರಾದ ಜಯರಾಮ ಮಯ್ಯ ಸ್ವಾಗತಿಸಿ, ಶ್ರೀವಿಕಾಸ್ ಆರಿಗಾ ಧನ್ಯವಾದವಿತ್ತ, ಈ ಕಾರ್ಯಕ್ರಮವನ್ನು ಶಿಕ್ಷಕ ಶ್ರೀ ಯುವರಾಜ್ ನಿರೂಪಿಸಿದರು.

LEAVE A REPLY

Please enter your comment!
Please enter your name here