ಕಳೆಂಜ: ಬಡವರ ಮೇಲೆ ದೌರ್ಜನ್ಯ ಮೆರೆದ ಅರಣ್ಯ ಇಲಾಖೆ-ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ

0

ಕಳೆಂಜ ಗ್ರಾಮದ ಅಮ್ಮಿಡ ಕುದ್ದಮನೆ ಸೇಸ ಗೌಡ ಎಂಬವರ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿತ್ತು.ಆದರೆ ಅ.6 ರಂದು ಅರಣ್ಯ ಇಲಾಖೆ ಫೌಂಡೇಶನ್ ಕಿತ್ತೆಸೆದು ಬಡ ಕುಟುಂಬದ ಮುಂದೆ ದರ್ಪ ತೋರಿರುವ ಬಗ್ಗೆ ಮನೆ ಮಗ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ.

ಘಟನೆ ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅ.7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೆ ಶೆಡ್ ನಿರ್ಮಾಣಕ್ಕೆ ಮುಂದಾದರು.ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಗಂಭೀರ ಮಾತಿನ ಚಕಮಕಿಗೆ ಕಾರಣವಾಯಿತು.309 ಸರ್ವೇ ನಂಬರ್ ನಲ್ಲಿ ಸುಮಾರು 120ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ.ಆದರೆ ಇದು ಅರಣ್ಯ ಎಂದಿರುವುದರಿಂದ ಅರಣ್ಯ ಇಲಾಖೆ ಮನೆ ಕೆಡವಿದೆ. ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ತೆರವುಗೊಳಿಸಿದ್ದಾರೆ ಎಂದು ಶಾಸಕರ ಸಮ್ಮುಖದಲ್ಲಿ ಊರವರೊಡಗೂಡಿ ತಾತ್ಕಾಲಿಕ ಶೆಡ್ ನಿರ್ಮಿಸಿದರು. ಇದಕ್ಕೆ ಅಡ್ಡಿಪಡಿಸುವ ಮೊದಲು ಕಂದಾಯ ಇಲಾಖೆ ಹಾಗೂ ಅರಣ್ಯ ಜಂಟಿ ಸರ್ವೇ ನಡೆಸಿ ಬಳಿಕ ತೆರವುಗೊಳಿಸಿ ಎಂದು ಸೂಚಿಸಿದರು.

ಸ್ಥಳದಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕ ಹರೀಶ್ ಪೂಂಜ, ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು.ಸಚಿವರು ಸದ್ಯ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಮೇಲಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದರು.

ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ಅರಣ್ಯಧಿಕಾರಿ ಜಯಪ್ರಕಾಶ್, ಕಳೆಂಜ ಉಪ ವಲಯರಣ್ಯಾಧಿಕಾರಿ ಪ್ರಶಾಂತ್, ಎಸ್ಎಐ ಧರ್ಮಸ್ಥಳ ಸಮರ್ಥ ಸ್ಥಳದಲ್ಲಿದ್ದರು.

LEAVE A REPLY

Please enter your comment!
Please enter your name here