ಪೆರ್ಮುದೆ ಕೊಪ್ಪದಬೈಲು ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆ ಪತ್ತೆ

0

ಕೊಯ್ಯೂರು: ಪೆರ್ಮುದೆ ಕೊಪ್ಪದಬೈಲು ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆಗಳು ಪತ್ತೆಯಾದ ಘಟನೆ ನಡೆದಿದೆ. ಪುಟಾಣಿಗಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕೊಡಲು ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಆಗಿರುವ ಮೊಟ್ಟೆಗಳು ಕೊಳೆತಿರುವುದು ಅ.೩ರಂದು ಪತ್ತೆಯಾಗಿದೆ. ಕೊಯ್ಯೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಹಾಲಿ ಸದಸ್ಯ ಜಗನ್ನಾಥರವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಪೋಷಕ ರಾಜೇಂದ್ರರವರ ದೂರಿನಂತೆ ಪರಿಶೀಲಿಸಿದಾಗ ಮೊಟ್ಟೆಗಳು ಕೊಳೆತಿರುವುದು ಕಂಡು ಬಂದಿದೆ.

ಅಂಗನವಾಡಿ ಕೇಂದ್ರಕ್ಕೆ ಮೊಟ್ಟೆ ಪೂರೈಕೆ ಮಾಡುವವರು ಒಡೆದು ಹೋಗಿರುವ ಮೊಟ್ಟೆಗಳನ್ನು ಹಿಂಪಡೆಯಲು ಒಪ್ಪುವುದಿಲ್ಲ.ಇದರಿಂದಾಗಿ ಇದೇ ಮೊಟ್ಟೆಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಇರಿಸಬೇಕಾಗುತ್ತದೆ.ನಾಲ್ಕೈದು ದಿನಗಳ ನಂತರ ಮೊಟ್ಟೆ ಕೊಳೆತು ಗಬ್ಬು ವಾಸನೆ ಬರುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ಅಮಿತಾ ಮತ್ತು ಸಹಾಯಕಿ ಶಾರದಾ ಈ ವೇಳೆ ತಿಳಿಸಿದರು.

ಕೊಳೆತ ಮೊಟ್ಟೆಗಳ ಘಟನೆಗೆ ಸಂಬಂಧಿಸಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.ಮೊಟ್ಟೆ ಸರಬರಾಜು ಮಾಡುವವರ ಗಮನಕ್ಕೆ ತರಲಾಗಿದೆ.ಈ ಹಿಂದೆ ಇಂತಹ ಸಮಸ್ಯೆ ಬಂದಿಲ್ಲ. ಇದೀಗ ಮೊಟ್ಟೆ ಕೊಳೆತಿರುವ ಕುರಿತು ದೂರು ಕೇಳಿ ಬಂದಿದೆ.ಕೊಳೆತ ಮೊಟ್ಟೆಗಳ ಬದಲು ಬೇರೆ ಮೊಟ್ಟೆ ಕೊಡುವ ವ್ಯವಸ್ಥೆ ಮಾಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಅಗ್ನೇಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here