ಎಸ್.ಡಿ.ಎಂ ಸಂಖ್ಯಾಶಾಸ್ತ್ರ ವಿಭಾಗದ ‘ಅನಂತ್ಯ’ ಉತ್ಸವಕ್ಕೆ ಚಾಲನೆ ಸದೃಢ ವ್ಯಕ್ತಿತ್ವದಿಂದ ಅವಕಾಶ ಸದ್ಬಳಕೆಯ ಜಾಣ್ಮೆ: ಡಾ.ಕುಮಾರ ಹೆಗ್ಡೆ ಬಿ.ಎ

0


ಉಜಿರೆ: ವಿದ್ಯಾರ್ಥಿಗಳು ಸದೃಢ ವ್ಯಕ್ತಿತ್ವ ರೂಪಿಸಿಕೊಂಡರೆ ಉನ್ನತ ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ರೂಢಿಯಾಗುತ್ತದೆ ಎಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ್ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗವು ಬುಧವಾರ ಆಯೋಜಿಸಿದ್ದ ‘ಅನಂತ್ಯ’ ಅಂತರ್‌ವಿಭಾಗೀಯ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಭಾನ್ವಿತರನ್ನು ಹುಡುಕಿಕೊಂಡು ಬರುವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವ ಮನಸ್ಸಿರಬೇಕು.ಹಾಗಾದಾಗ ಮಾತ್ರ ವೃತ್ತಿಪರ ರಂಗದಲ್ಲಿ ಯಶಸ್ಸನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
ಪ್ರಸ್ತುತ ಜಗತ್ತಿನಲ್ಲಿ ಹಲವಾರು ಕಾಲೇಜು, ವಿಶ್ವವಿದ್ಯಾನಿಲಯಗಳು ಇದ್ದರೂ ಇಂದಿಗೂ ಸಹ ಯುವಕರಿಗೆ ಉದ್ಯೋಗದ ಕೊರತೆ ಕಾಡುತ್ತಲೇ ಬರುತ್ತಿದೆ.ಏಕೆಂದರೆ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆ ಜೊತೆಗೆ ಕೌಶಲ್ಯವನ್ನು ಕೂಡ ವೃದ್ದಿಸಿಕೊಳ್ಳುವುದು ಅತ್ಯಗತ್ಯ.ಅದೇ ರೀತಿ ಮಾನಸಿಕ ಮತ್ತು ದೈಹಿಕವಾಗಿ ಸಮರ್ಥರಾಗಿದ್ದಲ್ಲಿ ಅವಕಾಶಗಳ ಸಕಾಲಿಕ ಸದುಪಯೋಗಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್.ಪಿ. ಹೆಚ್ಚಿನ ಸಂಖ್ಯೆಯ ಪ್ರತಿಸ್ಪರ್ಧಿಗಳ ನಡುವೆ ಸ್ವಯಂ ಸ್ಪರ್ಧಾತ್ಮಕತೆಯನ್ನು ರೂಪಿಸಿಕೊಳ್ಳುವುದರ ಅಗತ್ಯವನ್ನು ಮನಗಾಣಿಸಿದರು.ಈಗಾಗಲೇ ನಮ್ಮ ಭಾರತ ದೇಶವು ಜನಸಂಖ್ಯೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಯುವಕರನ್ನು ಹೊಂದಿರುವಂತಹ ದೇಶ ನಮ್ಮ ಭಾರತ. ಅತ್ಯಧಿಕ ಸಂಖ್ಯೆಯಲ್ಲಿ ಪ್ರತಿಭಾನ್ವಿತರೂ ಇದ್ದಾರೆ.ಇವರ ಮಧ್ಯೆ ಮಹತ್ವದ ಅವಕಾಶಗಳನ್ನು ಪಡೆಯಬೇಕಾದರೆ ವಿಶೇಷ ನೈಪುಣ್ಯ ಅಗತ್ಯವಾಗುತ್ತದೆ. ಅಂತಹ ನೈಪುಣ್ಯವನ್ನು ಗಳಿಸಿಕೊಳ್ಳುವುದರ ಕಡೆಗೇ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಬಹುಮುಖೀ ಕೌಶಲ್ಯಗಳೊಂದಿಗೆ ಪ್ರತಿಭಾವಂತಿಕೆಯುನ್ನು ರೂಢಿಸಿಕೊಂಡರೆ ಅವಕಾಶಗಳು ಸಹಜವಾಗಿಯೇ ಒಲಿಯುತ್ತವೆ. ಪ್ರತಿಭಾ ಸಾಮರ್ಥ್ಯವನ್ನು ಸೀಮಿತಗೊಳಿಸಿಕೊಳ್ಳುವುದಕ್ಕಿಂತ ಅದನ್ನು ಇನ್ನಷ್ಟು ವಿಸ್ತರಿಸುವುದರ ಕಡೆಗೇ ಹೆಚ್ಚಿನ ಶ್ರದ್ಧೆ ತೋರಬೇಕಾಗುತ್ತದೆ. ಅಂತಹ ಶ್ರದ್ಧೆಯಿಂದ ವಿಶೇಷ ಸಾಧನೆ ಸಾಧ್ಯವಾಗುತ್ತದೆ ಎಂದು ನುಡಿದರು.
ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಾಂತಿಪ್ರಕಾಶ್ ಉಪಸ್ಥಿತರಿದ್ದರು.ಉತ್ಸವವನ್ನು ಸಂಖ್ಯಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ವೇತಾಕುಮಾರಿ, ಸ್ವಾತಿ ಮತ್ತು ಪ್ರದೀಪ್ ಕೆ ಸಂಯೋಜಿಸಿದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿ ದೀಪ ವೈಷ್ಣವ ನಿರೂಪಿಸಿದರು. ಅಶ್ವತಿ ಸ್ವಾಗತಿಸಿ ನಿಖಿತಾ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here