ಯೋಧ ಏಕನಾಥ ಶೆಟ್ಟಿಯವರಿಗೆ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ- ಡಾ.ನಿರ್ಮಲಾನಂದ ಸ್ವಾಮೀಜಿಯಿಂದ ಜಯಂತಿ ಶೆಟ್ಟಿಯವರಿಗೆ ಪ್ರದಾನ

0

ಬೆಳ್ತಂಗಡಿ: ಭಾರತೀಯ ಭೂಸೇನೆಯ ಯೋಧ ಏಕನಾಥ್ ಶೆಟ್ಟಿಯವರಿಗೆ ಕೆದಂಬಾಡಿ ರಾಮಯ್ಯಗೌಡ ರಾಜ್ಯ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ ಗುರುವಾಯನಕೆರೆ ನಿವಾಸಿ ಯೋಧ ಏಕನಾಥ್ ಶೆಟ್ಟಿಯವರ ಪರವಾಗಿ ಅವರ ಮಡದಿ ಜಯಂತಿ, ಮಗಳು ಆಶಿತಾ, ಮಗ ಅಕ್ಷಯ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.


ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ಎ.5ರಂದು ಮಂಗಳೂರಿನ ಅಲೋಶಿಯಸ್ ಕಾಲೇಜಿನ ಲೊಯೊಲ್ಲಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರ ರೈತಾಪಿ ಸೇನೆಯ ವತಿಯಿಂದ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ-ಸಂಸ್ಕರಣ ದಿನ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ ಜಯಂತಿ ಶೆಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ವೇಳೆ ಆದಿಚುಂಚನಗಿರಿ ಶಾಖಾ ಮಠ ಮಂಗಳೂರಿನ ಡಾ.ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ವಿಗಾರ್ ಜನರಲ್ ಮಂಗಳೂರು ಧರ್ಮ ಪ್ರಾಂತ್ಯದ ಮ್ಯಾಕ್ಸಿಮ್ ನೊರೊನ್ಹಾ, ಮುಸ್ಲೀಂ ಧರ್ಮಗುರು ಯು ಕೆ ಅಬ್ದುಲ್ ಅಜೀಜ್ ಧಾರಿಮೀ ಉಪಸ್ಥಿತರಿದ್ದರು.


ಸುಬೇದಾರ್ ಏಕನಾಥ ಶೆಟ್ಟಿಯವರು 1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆಯನ್ನು ಆರಂಭಿಸಿದರು. ಅಲ್ಲಿಂದ ಮುಂದೆ ಕಾರ್ಗಿಲ್ ನಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕವನ್ನು ಪಡೆದಿದ್ದರು. ನಂತರ ಸುಬೇದಾರ್ ರ್ಯಾಂಕ್ ನೊಂದಿಗೆ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಆದರೆ ಊರಿಗಿಂತ, ಊರಿನ ಉದ್ಯೋಗಕ್ಕಿಂತ ದೇಶಸೇವೆಯೇ ಆಗಬಹುದು ಅಂದುಕೊಂಡು ಮತ್ತೆ ಸೇನೆಯ ರಕ್ಷಣಾ ವಿಭಾಗಕ್ಕೆ ಸೇರ್ಪಡೆಗೊಂಡು ವಿಶೇಷ ತರಬೇತಿ ಮುಗಿಸಿ ವಾಯುಸೇನೆಯಲ್ಲಿ ತಮ್ಮ ಸೇವೆ ಆರಂಭಿಸಿದರು. 2016ರ ಜುಲೈ 22ರಂದು ಸೇನಾ ಕರ್ತವ್ಯ ನಿಮಿತ್ತ ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾಲ್ ಪೋರ್ಟ್ ಬ್ಲೇರ್ ಗೆ ವಿಮಾನದಲ್ಲಿ ತೆರಳುತ್ತಿದ್ದಾಗ ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಈವರೆಗೂ ಸುಳಿವು ದೊರಕಿಲ್ಲ.

LEAVE A REPLY

Please enter your comment!
Please enter your name here