ರಸ್ತೆ ಮಾಡುವಾಗ ಸರಿಯಾದ ಚರಂಡಿ ನಿರ್ಮಿಸದಿರುವುದರಿಂದ ಮಳೆ ನೀರು ತೋಟಕ್ಕೆ ಹರಿದು ಕೃಷಿ ಹಾನಿಗೊಂಡಿದೆ. ಸಂಬಂಧಪಟ್ಟವರು ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಅಜ್ಜಾವರದ ಚೈತನ್ಯ ಸೇವಾ ಶ್ರಮದ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಅವರ ಸಹೋದರ ಪದ್ಮನಾಭ ಗೌಡರು ಹೇಳಿದ್ದಾರೆ.
ಅಕ್ಟೋಬರ್ 28ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ವಿಷಯ ತಿಳಿಸಿದರು.
ಸುಳ್ಯದಿಂದ ಮಂಡೆಕೋಲಿಗೆ ಹೋಗುವ ಮಾರ್ಗ ಅಭಿವೃದ್ಧಿ ಸಂದರ್ಭದಲ್ಲಿ ಅಜ್ಜಾವರದಲ್ಲಿ ಸಮರ್ಪಕ ಚರಂಡಿ ನಿರ್ಮಾಣ ಮಾಡಿಲ್ಲ. ಚರಂಡಿ ಹೂಳನ್ನು ತೆಗೆಯದ ಕಾರಣ ಮಳೆ ನೀರು ಚರಂಡಿಯಲ್ಲಿ ಹೋಗದೆ ಪಕ್ಕದಲ್ಲಿನ ನಮ್ಮ ತೋಟಕ್ಕೆ ಹರಿದು ಬಂದುದರಿಂದ ಕೃಷಿ ಹಾಳಾಗಿದೆ. ಇದನ್ನು ಕೂಡಲೇ ಪರಿಶೀಲಿಸಿ ಸರಿಪಡಿಸಬೇಕೆಂದು ನಾವು ಜಿಲ್ಲಾಧಿಕಾರಿಯಾಗಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತ್, ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಚರಂಡಿ ಸಮರ್ಪಕವಾಗಿ ನಿರ್ಮಿಸಿ ಮಳೆ ನೀರು ತೋಟಕ್ಕೆ ಬಾರದಂತೆ ತಡೆಯಬೇಕೆಂದು ನಾವು ಆಗ್ರಹಿಸುತ್ತಿರುವುದಾಗಿ ಅವರು ಹೇಳಿದರು.