ವೇಣೂರು: ಹೊಸಂಗಡಿ ಗ್ರಾಮದ ಪೆರಿಂಜೆ ಮುರದಬೆಟ್ಟು ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ, ಯಕ್ಷಗಾನ ಕಲಾವಿದ ಎಂ.ಕೆ. ವಸಂತ ಮುರದಬೆಟ್ಟು (85) ಅವರು ಅಲ್ಪ ಕಾಲದ ಅಸೌಖ್ಯದಿಂದ ನ. 10ರಂದು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಪತ್ನಿ ರಾಧಾ, ಮುಚ್ಚೂರು ಗ್ರಾ.ಪ೦. ಕಾರ್ಯದರ್ಶಿ ಸತೀಶ್ ಕುಮಾರ್ ಪಿ.ವಿ. ಸೇರಿದ೦ತೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು ಮುಖ್ಯ ಶಿಕ್ಷಕರಾಗಿ ತಲಪಾಡಿ, ಬಡಕೋಡಿ, ಆರಂಬೋಡಿ ಹಾಗೂ ಪೆರಿಂಜೆ ಶಾಲೆಗಳಲ್ಲಿ ಸುಮಾರು 40 ವರ್ಷಗಳ ಕಾಲ ಅನುಪಮ ಸರಕಾರಿ ಸೇವೆ ಸಲ್ಲಿಸಿ 1981ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿ ಆದರ್ಶಪ್ರಾಯರಾಗಿದ್ದರು. ನಿರೂಪಕರಾಗಿ, ಕಂಬಳ ಕ್ರೀಡೆಯ ತೀರ್ಪುಗಾರರಾಗಿ, ಯಕ್ಷಗಾನ ಕಲಾವಿದರಾಗಿ ಓರ್ವ ಸಮರ್ಥ ಅರ್ಥದಾರಿ ಎಣಿಸಿಕೊಂಡಿದ್ದರು. ಶ್ರೀಕೃಷ್ಣ, ಸುಧನ್ವ, ಪ್ರಭಾವತಿ, ರತ್ನಾವತಿ ಕಲ್ಯಾಣದ ರತ್ನಾವತಿ, ವಿದ್ಯುನ್ಮತಿ, ಮಾಯಾ ಶೂರ್ಪನಕಿ ಮೊದಲಾದ ಪಾತ್ರ ನಿರ್ವಹಣೆ ಮಾಡಿದ್ದರು. ಹಲವಾರು ಕಡೆಗಳಲ್ಲಿ ಸಮ್ಮಾನಿಸಲ್ಪಟ್ಟಿದ್ದ ಇವರು ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನನ್ಯ ಭಕ್ತರೂ ಆಗಿದ್ದರು.