ವೇಣೂರು: ಯಕ್ಷ ಬಳಗ ಬೆಳ್ತಂಗಡಿ ಆಶ್ರಯದಲ್ಲಿ ಯಕ್ಷ ಬಳಗ ವೇಣೂರು ವಲಯದ ವತಿಯಿಂದ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಡಿ.೧ ರಂದು ವೇಣೂರು ಮುಖ್ಯಪೇಟೆಯಲ್ಲಿ ಜರಗಲಿರುವ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಬಗ್ಗೆ ಪೂರ್ವಭಾವಿ ಸಭೆಯು ನ. 9ರ೦ದು ಸ೦ಜೆ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವೇಣೂರು ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ವಹಿಸಿದ್ದರು. ಯಕ್ಷ ಬಳಗ ಬೆಳ್ತಂಗಡಿ ಇದರ ಗೌರವಾಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಮ್ ಮಾತನಾಡಿ, ನೂತನವಾಗಿ ಆರಂಭವಾದ ಗೆಜ್ಜೆಗಿರಿ ಮೇಳದ ಯಕ್ಷಗಾನವನ್ನು ಬೆಳ್ತಂಗಡಿ ತಾಲೂಕಿನಲ್ಲಿ ಯಕ್ಷ ಬಳಗ ಎಂಬ ಕಲಾ ಸಂಘಟನೆಯನ್ನು ಕಟ್ಟಿಕೊಂಡು ಪ್ರಪ್ರಥಮವಾಗಿ ತಾಲೂಕಿನಲ್ಲಿ 5 ಕಡೆಗಳಲ್ಲಿ ಬಯಲಾಟ ನಡೆಸುವ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ. ಈ ಬಗ್ಗೆ ವಲಯ ಸಮಿತಿಗಳನ್ನು ರಚಿಸಿ ಆ ಮೂಲಕ ವಿಶೇಷವಾಗಿ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ. ಯಕ್ಷಗಾನ ಕಲಾವಿದರನ್ನು, ಕಲಾ ಪೋಷಕರನ್ನು ಗುರುತಿಸುವ ಕೆಲಸ ಇದರಿಂದ ನಡೆಯಲಿದೆ ಎಂದರು. ಬಳಿಕ ಯಕ್ಷ ಬಳಗ ವೇಣೂರು ವಲಯ ಸಮಿತಿಯನ್ನು ರಚಿಸಲಾಯಿತು.
ಯಕ್ಷ ಬಳಗ ಬೆಳ್ತಂಗಡಿ ಇದರ ಅಧ್ಯಕ್ಷ ಸಂತೋಷ್ ಗೌಡ ವಳಂಬ್ರ, ಕೋಶಾಧಿಕಾರಿ ಶೇಖರ ಕುಕ್ಕೇಡಿ, ಮುಖಂಡರಾದ ಎ. ಜಯರಾಮ್ ಶೆಟ್ಟಿ, ಅಶೋಕ್ ಪಾಣೂರು, ಪೂವಪ್ಪ ಪೂಜಾರಿ, ಹರೀಶ್ ಕುಮಾರ್ ಪೊಕ್ಕಿ, ನಿತೀಶ್ ಎಚ್., ಮಾರ್ಕ್ ಪಿರೇರಾ, ಸತೀಶ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು.
ರಮೇಶ್ ಪೂಜಾರಿ ಪಡ್ಡಾಯಿಮಜಲು ಸ್ವಾಗತಿಸಿ, ವಂದನಾ ಭಂಡಾರಿ ವಂದಿಸಿದರು. ಯಕ್ಷ ಬಳಗ ಬೆಳ್ತಂಗಡಿ ಇದರ ಕಾರ್ಯದರ್ಶಿ ನಿತ್ಯಾನಂದ ನಾವರ ಸಭೆಯನ್ನು ನಿರ್ವಹಿಸಿದರು.