ನಾರಾವಿ: ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಮ್ಯಾಕ್ಸಿಮೋ ಗೂಡ್ಸ್ ತ್ರಿಚಕ್ರ ವಾಹನದಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದುದನ್ನು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿ ಮಾದಕ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಮ್ಯಾಕ್ಸಿಮೋ ಗೂಡ್ಸ್ ತ್ರಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಅ.14 ರಂದು ನಡೆದಿದೆ.
ಆರೋಪಿಗಳು ಕಾಸರಗೋಡು ನಿವಾಸಿ ಮಹಮ್ಮದ್ ಅಶ್ರಫ್(34) ಹಾಗೂ ಅಬ್ದುಲ್ ಲತೀಫ್ ಕೆ(36) ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಗೂಡ್ಸ್ ವಾಹನದಲ್ಲಿ ಅಕ್ರಮ ಗಾಂಜಾ ಸಾಗಿಸುತ್ತಿರುವುದು ಕಂಡುಬಂದಿದ್ದು ಈ ಬಗ್ಗೆ ಪತ್ರಾಂಕಿತ ಅಧಿಕಾರಿ ಹಾಗೂ ಪಂಚರ ಸಮಕ್ಷಮ ಆರೋಪಿತರ ವಶದಲ್ಲಿದ್ದ ಸುಮಾರು 30,000 ರೂ ಮೌಲ್ಯದ 805.00 ಗ್ರಾಂ ತೂಕದ ಮಾದಕ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸುತ್ತಿದ್ದ ಅಂದಾಜು ರೂ 2,00,000 ಮೌಲ್ಯದ ಮ್ಯಾಕ್ಸಿಮೋ ಗೂಡ್ಸ್ ತ್ರಿಚಕ್ರ ವಾಹನವನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದೆ.