


ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೆ ವರ್ಧಂತ್ಯುತ್ಸವ ಆಚರಣೆಯ ಸಂದರ್ಭದಲ್ಲಿ ಅ.24ರಂದು ಕಂಚಿಕಾಮಕೋಟಿ ಪೀಠದ ಸ್ವಾಮೀಜಿ ಅವರು ಬಳಸುತ್ತಿದ್ದ ರಿಕ್ಷಾವನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಲಾಯಿತು.


ಭಕ್ತರು ತಂದ ರಿಕ್ಷಾವನ್ನು ಧರ್ಮಸ್ಥಳದಲ್ಲಿ ಮಾಹಿತಿ ಕಚೇರಿ ಬಳಿಯಿಂದ ಭವ್ಯ ಮೆರವಣಿಗೆಯಲ್ಲಿ ಹೆಗ್ಗಡೆಯವರ ನಿವಾಸ ಬೀಡಿಗೆ ತರಲಾಯಿತು. ಕಂಚಿ ಕಾಮಕೋಟಿ ಸ್ವಾಮೀಜಿಯವರು ತಮ್ಮ ಪಾದಯಾತ್ರೆಯ ಸಂದರ್ಭದಲ್ಲಿ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು, ಅನುಷ್ಠಾನ ಪಾತ್ರೆಗಳನ್ನು ಮತ್ತು ದರ್ಭಾಸನದ ಸಾಗಾಣಿಕೆಗೆ ಇದನ್ನು ಬಳಸುತ್ತಿದ್ದರು.
ಹೆಗ್ಗಡೆಯವರು ಈ ವಿಶಿಷ್ಟ ಕೊಡುಗೆಯನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.










