
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದೆ ಎಂದು ದೂರು ನೀಡಲಾದ ಪ್ರಕರಣದಲ್ಲಿ ಎಸ್ಐಟಿ ತನಿಖಾಧಿಕಾರಿಗಳು ಸ್ಥಳ ಮಹಜರು ಕಾರ್ಯ ಶುರು ಮಾಡಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ತೆಂಗಿನ ತೋಟದ ಪೊದೆಗಳಲ್ಲಿ ಮಹಜರು ಕಾರ್ಯವನ್ನು ತನಿಖಾಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ಸಾಕ್ಷಿ ದೂರುದಾರನನ್ನು ಪೊಲೀಸರು ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಸ್ಥಳಕ್ಕೆ ಕೊಂಡೊಯ್ದು ಈ ಕೆಲಸ ಆರಂಭಿಸಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ಸಾಕ್ಷಿ ದೂರುದಾರ ಶವ ಹೂತಿಟ್ಟ ಸ್ಥಳಗಳನ್ನು ತೋರಿಸುತ್ತಿದ್ದು, ಅದಕ್ಕೆ ಪೂರಕವಾಗಿ ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಸ್ನಾನಘಟ್ಟ ಸಮೀಪದಲ್ಲಿರುವ ಕಾಡಿನ ಒಳಗಡೆ ಅಧಿಕಾರಿಗಳನ್ನು ಕರೆದುಕೊಂಡ ಹೋದ ಸಾಕ್ಷಿ ದೂರುದಾರ ಅಲ್ಲಿ ಹೂತಿಟ್ಟ ಸ್ಥಳ ತೋರಿಸುತ್ತಿದ್ದಾರೆ. ಮಳೆಯ ನಡುವೆಯೂ ಕಾಡಿನ ಒಳಗಡೆ ಮಹಜರು ಕಾರ್ಯ ಮುಂದುವರಿದಿದೆ.
ಕಂದಾಯ ಇಲಾಖೆ, ಅರಣ್ಯ ಇಲಾಖೆ, ಎಸ್ಬಿಸಿಒ ಅಧಿಕಾರಿಗಳು, ಎಫ್ಎಎಲ್ ತಜ್ಞರು ಎಸ್ಐಟಿ ತನಿಖಾಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ.
ಸರ್ವೇಯರ್ ಅಧಿಕಾರಿಗಳು ಕೂಡ ಹಲವು ದಾಖಲೆಗಳನ್ನು ತಂದಿದ್ದು, ಪೊಲೀಸರಿಗೆ ಅದನ್ನು ನೀಡಿದ್ದಾರೆ. ನೇತ್ರಾವತಿ ನದಿ ತಟದ ಬಳಿ ಜನಸಾಗರವೇ ಸೇರಿದ್ದು, ನೂರಾರು ಮಂದಿ ವೀಕ್ಷಿಸುತ್ತಿದ್ದಾರೆ. 40 ಅಧಿಕ ಮಾಧ್ಯಮಗಳ ವರದಿಗಾರರು ಸ್ಥಳದಲ್ಲಿ ಜಮಾಯಿಸಿದ್ದಾರೆ.