ಉಜಿರೆ: 2011ರ ಜೂ.6ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮತ್ತು ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಇದರ ಧರ್ಮಗುರು ಜೇಮ್ಸ್ ಡಿಸೋಜಾ ಅವರ ಉಪಸ್ಥಿತಿಯಲ್ಲಿ ಉಜಿರೆ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶೀರ್ವಚನದೊಂದಿಗೆ ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ದಿ. ಯು.ವಿಜಯರಾಘವ ಪಡ್ವೆಟ್ನಾಯ ಅವರಿಂದ ಉದ್ಘಾಟನೆಗೊಂಡ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕರ ದಿನಾಚರಣೆ ಉಜಿರೆಯಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಆಚರಿಸಲಾಯಿತು.
ಆರಂಭದಲ್ಲಿ ಪ್ರಾರ್ಥನಾ ವಿಧಿ ನಡೆಸಲಾಯಿತು. ನಿರ್ದೇಶಕ ವಲೇರಿಯನ್ ಕ್ರಾಸ್ತ ಬೈಬಲ್ ಪಠಿಸಿದರು. ನಿರ್ದೇಶಕಿ ಮೇಬಲ್ ಲೋಬೊ ವಿಶ್ವಾಸದ ಪ್ರಾರ್ಥನೆಗಳನ್ನು ವಾಚಿಸಿದರು. ಸಿಬ್ಬಂದಿ ಪ್ರಾರ್ಥನಾ ಗೀತೆ ಹಾಡಿದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ಮಾತನಾಡಿ ಸಂಘದ ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೂ ಅಂದಿನ ಸಂಘದ ಪ್ರವರ್ತಕರ ಮತ್ತು ಚುನಾಯಿತ ಆಡಳಿತ ನಿರ್ದೇಶಕರ ಸಾಮೂಹಿಕ ನೇತೃತ್ವದಲ್ಲಿ ಎಲ್ಲಾ ಸವಾಲುಗಳನ್ನು ಸ್ವೀಕರಿಸಿದ್ದರಿಂದಾಗಿ ಸಂಘವು ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಬಂದಿದೆ. ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೇ ಸಂಘಗಳಲ್ಲಿ ಒಂದಾಗಿ ಬೆಳೆದಿದೆ ಎಂದರು. ಇದಕ್ಕಾಗಿ ಸಂಘದ ಆಡಳಿತ ಮಂಡಳಿ, ಸಿಬಂಧಿ ವರ್ಗ ಮತ್ತು ಪಿಗ್ಮಿ ಸಂಗ್ರಾಹಕರು ಸಾಮೂಹಿಕವಾಗಿ ದುಡಿಯುತ್ತಿದ್ದಾರೆ ಎಂದರಲ್ಲದೆ ಸಂಘದ ಕೀರ್ತಿ ಉತ್ತುಂಗಕ್ಕೆ ಏರಲು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕಿ ಗೀತಾ ಫೆಲ್ಸಿಯಾನಾ ಸಂಘ ಆರಂಭಗೊಂಡ ನಂತರ ನಡೆದು ಬಂದ ದಾರಿಯ ಬಗ್ಗೆ ವಿವರವಾದ ವರದಿಯನ್ನು ವಾಚಿಸಿದರು. ಸಂಘದ ಅಧ್ಯಕ್ಷರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ಸಂಘದ ಆರಂಭದ ಪ್ರವರ್ತಕರಿಗೆ ಮತ್ತು ಹಾಲಿ ನಿರ್ದೇಶಕರಿಗೆ ಹೂಗಿಡಗಳನ್ನು ನೀಡಿ ಅಭಿನಂದಿಸಲಾಯಿತು. ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ನಿರ್ದೇಶಕ ಸುನಿಲ್ ಸಂತೋಷ್ ಮೊರಾಸ್ ಧನ್ಯವಾದವಿತ್ತರು.