ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕ್ರಿಮಿನಲ್ ಪ್ರಕರಣಗಳಿಲ್ಲದ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ಮನೋಭಾವದ ವ್ಯಕ್ತಿಗಳ ಮನೆಗೆ ತಡ ರಾತ್ರಿಯಲ್ಲಿ ಪೊಲೀಸರು ಭೇಟಿ ನೀಡಿ ಜಿಪಿಎಸ್ ಸ್ಥಳಗಳನ್ನು ಯಾವುದೇ ಕಾನೂನು ಆದೇಶ ಅಥವಾ ಯಾವುದೇ ಸರಿಯಾದ ಪ್ರಕ್ರಿಯೆಗಳಿಲ್ಲದೆ ದಾಖಲಿಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಕಾನೂನಿನ ನಿಯಮಗಳಿಗೆ ಗಂಭೀರ ಅಪಾಯವನ್ನು ಉಂಟು ಮಾಡುತ್ತಿದೆ ಎಂದು ಆರೋಪಿಸಿ ನೀಡಲಾದ ದೂರನ್ನು ದಾಖಲಿಸಿಕೊಂಡಿರುವ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರವು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೊಟೀಸ್ ಜಾರಿ ಮಾಡಿ ಜೂ.೧೭ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಹೈಕೋರ್ಟ್ನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಪುತ್ತೂರು ಅವರ ಮಾರ್ಗದರ್ಶನದಲ್ಲಿ ವಕೀಲ ಗಿರೀಶ್ ಭಾರದ್ವಾಜ, ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಸಂಚಾಲಕರಾಗಿರುವ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಯು.ಜಿ.ರಾಧಾ ಮತ್ತಿತರರು ಈ ಕುರಿತು ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಜ್ಯ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಅಗತ್ಯ ಕ್ರಮಕ್ಕೆ ಕೋರಿದ್ದರು.
ದ.ಕ.ಜಿಲ್ಲೆಯ ಪೊಲೀಸರು ಗೊಂದಲದ ಕ್ರಮಗಳನ್ನು ಮಾಡುತ್ತಿದ್ದು ಕ್ರಿಮಿನಲ್ ಹಿನ್ನೆಲೆ ಅಥವಾ ಬಾಕಿ ಇರುವ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದ ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕ ಮನೋಭಾವದ ವ್ಯಕ್ತಿಗಳ ಮನೆಗಳಿಗೂ ಎಸ್ಪಿಯವರ ನಿರ್ದೇಶನದಲ್ಲಿ ಪೊಲೀಸ್ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಈ ಭೇಟಿಗಳನ್ನು ತಡರಾತ್ರಿಯ ಸಮಯದಲ್ಲಿ ನಡೆಸಲಾಗುತ್ತಿದ್ದು ರಾತ್ರಿ ೧೧ ಗಂಟೆಯ ನಂತರ ಪೊಲೀಸರು ಈ ವ್ಯಕ್ತಿಗಳ ಜಿಪಿಎಸ್ ಸ್ಥಳಗಳನ್ನು ಯಾವುದೇ ಕಾನೂನು ಆದೇಶ ಅಥವಾ ಸರಿಯಾದ ಪ್ರಕ್ರಿಯೆಯಿಲ್ಲದೆ ದಾಖಲಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ದೂರು ದಾಖಲಿಸಿಕೊಂಡಿರುವ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಈ ಕುರಿತು ಎಸ್ಪಿಯವರಿಗೆ ನೊಟೀಸ್ ಜಾರಿ ಮಾಡಿ ಜೂ.೧೭ಕ್ಕೆ ವಿಚಾರಣೆ ನಿಗದಿ ಮಾಡಿದೆ.
ಮನೋಜ್ ಕುಂಜರ್ಪ ಪರ ವಕೀಲರಿಂದ ಎ.ಸಿ. ಕೋರ್ಟ್ನಲ್ಲಿ ವಾದ:ಮಹೇಶ್ ಶೆಟ್ಟಿ ತಿಮರೋಡಿಗೆ ಇನ್ನೂ ಜಾರಿಯಾಗದ ಗಡಿಪಾರು ನೊಟೀಸ್
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಸಂಬಂಧಪಟ್ಟವಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಒಟ್ಟು ೩೬ ಮಂದಿ ವಿರುದ್ಧ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ನೋಟೀಸ್ ನೀಡಿರುವ ಪಟ್ಟಿಯಲ್ಲಿದ್ದ ಪುತ್ತೂರು ಉಪ ವಿಭಾಗದ ವ್ಯಾಪ್ತಿಯ ಎಂಟು ಮಂದಿಯ ಪರ ಅವರ ವಕೀಲರು ಜೂ.೬ರಂದು ಉಪವಿಭಾಗದ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ದಂಡಾಧಿಕಾರಿಯವರು ಎಂಟು ಮಂದಿಗೂ ಪ್ರತ್ಯೇಕ ದಿನಾಂಕವನ್ನು ನಿಗದಿ ಮಾಡಿ ವಿಚಾರಣೆ ಮುಂದೂಡಿದ್ದಾರೆ. ಪುತ್ತೂರು ನಗರ ಮತ್ತು ಗ್ರಾಮಾಂತರದ ೯ ಮಂದಿ ಸೇರಿದಂತೆ ದ.ಕ.ಜಿಲ್ಲಾ ಪೊಲೀಸ್: ಘಟಕ ವ್ಯಾಪ್ತಿಯಿಂದ ಒಟ್ಟು ೩೬ ಮಂದಿಯನ್ನು ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆಗಿದ್ದು ಜಿಲ್ಲಾ ಪೊಲೀಸ್ ಘಟಕ ೩೬ ಮಂದಿಯನ್ನು ಒಳಗೊಂಡಿರುವ ಪಟ್ಟಿಯನ್ನು ಪ್ರಕಟಿಸಿತ್ತು. ಈ ಪೈಕಿ ಪುತ್ತೂರು ಉಪ ವಿಭಾಗದ ವ್ಯಾಪ್ತಿಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಕೀಂ ಕೂರ್ನಡ್ಕ ಯಾನೆ ಅಬ್ದುಲ್ ಹಕೀಂ, ಅರುಣ್ ಕುಮಾರ್ ಪುತ್ತಿಲ, ಅಬ್ದುಲ್ ರಹಿಮಾನ್, ಕೆ.ಅಝೀರh, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಮಹಮ್ಮದ್ ಶಾಕೀರ್, ಅಬ್ದುಲ್ ಅಝೀರ ಯಾನೆ ಕರಾಯ ಅಝೀರh, ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಮನೋಜ್ ಕುಮಾರ್ ಕುಂಜರ್ಪ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಹಮ್ಮದ್ ಅಶ್ರಫ್ರವರಿಗೆ ಗಡಿಪಾಡಿಗೆ ಸಂಬಂಧಿಸಿದ ನೋಟೀಸ್ ನೀಡಿ ಜೂ.೬ರಂದು ಸಹಾಯಕ ಆಯುಕ್ತರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಕೀಲರು ಹಾಜರಾಗಿದ್ದರು. ಗಡಿಪಾರು ಮಾಡಲು ಪಟ್ಟಿ ಮಾಡಲಾಗಿರುವವಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಸ್ಥಾಪಕರೂ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರೂ ಆಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಇನ್ನೂ ಯಾವುದೇ ನೊಟೀಸ್ ಜಾರಿಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಮನೋಜ್ ಕುಂಜರ್ಪ ಪರ ವಕೀಲ ಚಿನ್ಮಯ್ ರೈ ಈಶರಮಂಗಲ ಅವರು ಸಹಾಯಕ ಆಯುಕ್ತರ ಎದುರು ಹಾಜರಾಗಿದ್ದರು. ಈ ವೇಳೆ ಸಹಾಯಕ ಆಯುಕ್ತರು ಮನೋಜ್ ಕುಂಜರ್ಪ ಅವರನ್ನು ಗಡಿಪಾರು ಮಾಡಲು ಜಾರಿಗೊಳಿಸಲಾಗಿರುವ ನೋಟೀಸಿಗೆ ಸೂಕ್ತ ದಾಖಲಾತಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದರು. ಅಲ್ಲದೆ ನೋಟೀಸಿಗೆ ಆಕ್ಷೇಪಣೆ ಸಲ್ಲಿಸಲು ವಕೀಲರಿಗೆ ಸೂಚಿಸಿ ಜೂ.೨೦ಕ್ಕೆ ವಿಚಾರಣೆ ಮುಂದೂಡಿದರು.
ತಾಲೂಕಿನಲ್ಲಿ ಹಲವರ ಮನೆಗೆ ಪೊಲೀಸರ ಭೇಟಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಲವರ ಮನೆಗೆ ಪೊಲೀಸರು ಭೇಟಿ ನೀಡಿ ಲೊಕೇಶನ್ ಸಹಿತ ಫೊಟೋ ಪಡೆದುಕೊಂಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಉಜಿರೆ, ಮನೋಜ್ ಕುಮಾರ್ ಕುಂಜರ್ಪ ಉಜಿರೆ, ರಂಜಿತ್ ಕಡಿರುದ್ಯಾವರ, ತಾಜುದ್ದೀನ್ ನಾವೂರು, ಉಮೇಶ್ ಕುಲಾಲ್ ಶಕ್ತಿನಗರ, ವಿತೇಶ್ ಪಡಂಗಡಿ, ಶ್ಯಾಮ್ ಸುಂದರ ನಡ, ಅಶುತೋಷ್ ಗೋವಿಂದೂರು, ರಫೀಕ್, ರಝಾಕ್ ಶಕ್ತಿನಗರ ಸಹಿತ ಇನ್ನೂ ಹಲವರ ಮನೆಗಳಿಗೆ ಪೊಲೀಸರು ಹೋಗಿ ಪೋಟೋ ತೆಗೆದು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಎಸ್.ಪಿ.ಗೆ ನೊಟೀಸ್ ಜಾರಿ: ಅರುಣ್ಶ್ಯಾಮ್
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಉಚ್ಛ ನ್ಯಾಯಾಲಯ, ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ, ಮಾನವ ಹಕ್ಕು ಆಯೋಗಗಳಿಗೆ ದೂರು ಸಲ್ಲಿಸಲಾಗಿದೆ. ಇದೀಗ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರದಿಂದ ದ.ಕ.ಎಸ್.ಪಿ.ಯವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಅರುಣ್ ಶ್ಯಾಮ್ ಪುತ್ತೂರು ತಿಳಿಸಿದ್ದಾರೆ.