
ಬೆಳ್ತಂಗಡಿ: ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಿರುವುದು ಸ್ವಾಗತಾರ್ಹ. ಆದರೆ ಕಳೆದೊಂದು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆ ಪ್ರಕರಣಗಳು ನಡೆದಿವೆ. ಅವುಗಳನ್ನೂ ಕೇಂದ್ರ ಸರ್ಕಾರ ಎನ್ಐಎ ತನಿಖೆಗೆ ವರ್ಗಾಯಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿ ಬಿಡುಗಡೆ ಪತ್ರಿಕೆ ಜತೆ ಮಾತನಾಡಿದ ಅವರು, ಬಿಜೆಪಿಯ ಭರತ್ ಶೆಟ್ಟಿ ಅವರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅಶ್ರಫ್ ಹತ್ಯೆಗೊಳಗಾಗಿದ್ದರು. ಅದೇ ರೀತಿ ಬಿಜೆಪಿ ಶಾಸಕ ರಾಜೇಶ್ ನಾಯಕ್ ಅವರ ಬಂಟ್ವಾಳ ಕ್ಷೇತ್ರದಲ್ಲಿ ರಹೀಂ ಹತ್ಯೆಯಾಗಿದೆ. ಈ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ಆಗಬೇಕಲ್ಲವೇ? ಹೀಗಾಗಿ ಕೇಂದ್ರ ಸರ್ಕಾರ ಸ್ವಯಂಪ್ರೇರಿತವಾಗಿ ಎನ್ಐಎ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಈ ಮೂರೂ ಕೊಲೆ ಕೇಸ್ಗಳ ಕೊಲೆಗಾರರನ್ನು ಪತ್ತೆ ಹಚ್ಚುವ ಜತೆಗೆ ಕೊಲೆಯ ಹಿಂದೆ ಇರುವವರನ್ನೂ ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಬೇಕು. ಸತ್ತವರು ಹಿಂದು ಅಥವಾ ಮುಸ್ಲಿಂ ಆಗಿರಲಿ. ಅವರು ಹೆತ್ತವರಿಗೆ ಮಕ್ಕಳೇ. ಅವರ ನೋವುಗಳಿಗೆ ಬೆಲೆ ಇಲ್ಲವೇ. ಹೀಗಾಗಿ, ಒಂದು ಕೊಲೆಯನ್ನು ಮಾತ್ರ ಎನ್ಐಎ ತನಿಖೆಗೆ ಒಳಪಡಿಸಿದರೆ ಕೇಂದ್ರ ಸರ್ಕಾರವೇ ಪಕ್ಷಪಾತ ಧೋರಣೆ ಮಾಡಿದಂತೆ ಆಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಮತ್ತೊಂದು ಬಿಹಾರ ಆಗುವುದು ಬೇಡ. ಇಲ್ಲಿ ಗುಂಪು ಘರ್ಷಣೆಗೆ ಕೇಂದ್ರ ಸರ್ಕಾರವೇ ಕಾರಣವಾಗುವುದು ಬೇಡ. ಬಿಹಾರದಲ್ಲಿನ ಗೂಂಡಾ ಪ್ರವೃತ್ತಿಗಳು ನಮ್ಮಲ್ಲಿ ಬರುವುದು ಬೇಡ. ಎಲ್ಲರಿಗೂ ಒಂದೇ ನ್ಯಾಯ ಎಂಬಂತೆ ಮೂರೂ ಪ್ರಕರಣಗಳನ್ನು ಎನ್ಐಎ ಸುಪರ್ದಿಗೆ ನೀಡಲಿ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.