ಧರ್ಮಸ್ಥಳ ಅಶೋಕನಗರದಲ್ಲಿ ಗಣರಾಜ್ಯೋತ್ಸವ ಆಚರಣೆ- ಅನಕ್ಷರತೆ, ಬಡತನ, ದೌರ್ಜನ್ಯ, ಮೇಲು-ಕೀಳು ಅಸಮಾನತೆಗಳಿಲ್ಲದ ಪ್ರಬುದ್ಧ ಭಾರತ ನಿರ್ಮಾಣವೇ ನಮ್ಮ ಸಂವಿಧಾನದ ಪ್ರಮುಖ ಆಶಯ: ವೆಂಕಪ್ಪ ಪಿ.ಎಸ್

0

ಧರ್ಮಸ್ಥಳ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬರೆದ ಭಾರತದ ಶ್ರೇಷ್ಠ ಸಂವಿಧಾನ ಯಥಾವತ್ತಾಗಿ ಜಾರಿಯಾಗುತ್ತಿದ್ದರೆ ಸ್ವಾತಂತ್ರ್ಯದ ನಂತರ ಕೇವಲ ಇಪ್ಪತ್ತು ವರ್ಷಗಳಲ್ಲಿ ಅನಕ್ಷರತೆ, ಬಡತನ, ದೌರ್ಜನ್ಯ, ಮೇಲುಕೀಳು ಅಸಮಾನತೆಗಳಿಲ್ಲದ ಪ್ರಬುದ್ಧ ಭಾರತ ನಿರ್ಮಾಣವಾಗುತ್ತಿತ್ತು, ಆದರೆ ಅದನ್ನು ಜಾರಿಗೊಳಿಸುವಲ್ಲಿ ಆಡಳಿತರೂಢರು ಎಡವಿದ ಪರಿಣಾಮ ಭಾರತ ಇಂದಿಗೂ ಈ ಸ್ಥಿತಿಯಲ್ಲಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರಕಿ 74 ವರ್ಷ ಕಳೆದರೂ ಇಂದಿಗೂ ಅಸಮಾನತೆ, ದೌರ್ಜನ್ಯ, ಶೋಷಣೆಗಳು ನಿತ್ಯನಿರಂತರ ಈ ದೇಶದಲ್ಲಿ ನಡೆಯುತ್ತಿರುವುದು ದುರಂತವೇ ಸರಿ ಎಂದು ಪುತ್ತೂರು ಠಾಣೆಯ ಆರಕ್ಷಕರಾದ ವೆಂಕಪ್ಪ ಪಿ.ಎಸ್ ಅವರು ಖೇದ ವ್ಯಕ್ತಪಡಿಸಿದರು.

ಅವರು ಜ.26ರಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಧರ್ಮಸ್ಥಳ ವಲಯ ಘಟಕ ಹಾಗೂ ಗಣರಾಜ್ಯೋತ್ಸವ ಆಚರಣಾ ಸಮಿತಿ ಅಶೋಕನಗರ ಧರ್ಮಸ್ಥಳ ಇವರ ಜಂಟಿ ಆಶ್ರಯದಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ದಿಕ್ಸೂಚಿ ಭಾಷಣವನ್ನು ಮಾಡುತ್ತಿದ್ದರು.

ಈ ದೇಶದಲ್ಲಿ ಎಲ್ಲರಿಗೂ ಅಂಬೇಡ್ಕರ್ ಯಾರು ಎಂದು ಗೊತ್ತಿದೆ ಆದರೆ ಅಂಬೇಡ್ಕರ್ ಏನು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅಂಬೇಡ್ಕರ್ ಎಂದರೆ ಏನು ಎಂದು ಗೊತ್ತಾಗಬೇಕಾದರೆ ಅವರು ಬರೆದ ಸಂವಿಧಾನವನ್ನು ನಾವೆಲ್ಲರೂ ಓದಬೇಕು. ಅದರಲ್ಲಿ ಅವರು ನಮಗೆ ನೀಡಿದ ಅವಕಾಶಗಳನ್ನು ಸರಿಯಾಗಿ ನಮ್ಮ ಜೀವನದಲ್ಲಿ ಬಳಸಿಕೊಂಡಲ್ಲಿ ನಮ್ಮೆಲ್ಲರ ಜೀವನವೂ ಅಭಿವೃದ್ಧಿಯಾಗಬಹುದು. ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಪರಿಶುದ್ಧ ಮನಸ್ಸಿನ ಪರಿಪೂರ್ಣ ವ್ಯಕ್ತಿತ್ವದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರೇ ನಮಗೆಲ್ಲರಿಗೂ ಆದರ್ಶವಾಗಬೇಕು. ಅವರಿಗಿಂತ ಶ್ರೇಷ್ಠ ಈ ದೇಶದಲ್ಲಿ ಮತ್ತೊಬ್ಬರಿಲ್ಲ ಎಂದು ಹೇಳಿದರು.

ಆದಿದ್ರಾವಿಡ ಸಮಾಜ ಸೇವಾ ಸಂಘದ ವಲಯ ಘಟಕದ ಅಧ್ಯಕ್ಷ ಸುರೇಶ್‌ರವರು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ, ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿಯವರು ಮಾತನಾಡಿ ಈ ದೇಶದಲ್ಲಿ ನಮಗೆ ಸಿಕ್ಕಿದ್ದೆಲ್ಲವೂ ಇನ್ನೂ ಸಿಗುವುದೇನಿದ್ದರೂ ಅದು ಸಂವಿಧಾನದಿಂದಲೇ ಹೊರತು ಬೇರೆ ಯಾವುದರಿಂದಲೂ ಅಲ್ಲ.ಅದಕ್ಕಾಗಿ ಸಂವಿಧಾನವನ್ನು ಉಳಿಸಲು ನಾವೆಲ್ಲರೂ ಸಂಘಟಿತರಾಗಬೇಕು.ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಯ ಮೇಲೆ ಆದಿದ್ರಾವಿಡ ಸಂಘಟನೆಯನ್ನು ತಾಲೂಕು ಹಾಗೂ ಜಿಲ್ಲೆಯಾದ್ಯಂತ ಸಂಘಟಿಸಬೇಕು ಎಂದು ಕರೆ ನೀಡಿದರು.

ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾರವರು ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿ ಶುಭಹಾರೈಸಿದರು. ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾ.ಪಂ.ಸದಸ್ಯೆ ಸುನೀತಾ, ಆದಿದ್ರಾವಿಡ ಸಮಾಜ ಸೇವಾ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ದಿನೇಶ್ ಕೊಕ್ಕಡ, ಅಶೋಕನಗರದ ಗುರಿಕಾರರಾದ ಕರಿಯ ಹಾಗೂ ಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಕಾರ್ಯಕ್ರಮದ ಊಟದ ವ್ಯವಸ್ಥೆಯನ್ನು ಒದಗಿಸಿದ ಬಾಬು ಗುರುಸ್ವಾಮಿಯವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಗೆ ಏರ್ಪಡಿಸಲಾದ ವಿವಿಧ ಸ್ಫರ್ಧಾವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಶೇಖರ್ ವಿ.ಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ರಮೇಶ್ ಹೆಚ್.ಎಂ. ಅವಲೋಕನ ವರದಿಯನ್ನು ವಾಚಿಸಿದರು. ಸುಜಾತರವರು ಬಹುಮಾನಿತರ ಪಟ್ಟಿ ವಾಚಿಸಿದರು.ಸಂತೋಷ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಕವಿತಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here