ಘಟಕದ ಶೀಘ್ರ ದುರಸ್ಥಿಗೆ ಗ್ರಾಮಸ್ಥರ ಆಗ್ರಹ
ಚೆಂಬು ಗ್ರಾಮದ ಆನೆಹಳ್ಳದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಪಂಪ್ ಕಳವಾದ ಘಟನೆ ಆರು ತಿಂಗಳ ಹಿಂದೆ ನಡೆದಿದ್ದು, ಇದುವರೆಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಈಗ ಅದು ಚರ್ಚೆಯ ವಿಚಾರವಾಗಿದೆ.
ಈ ಯೋಜನೆಯು 2019 ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದರಿಂದ 2 ರೂ.ಗೆ 20 ಲೀ. ನೀರನ್ನು ಚೆಂಬು ಗ್ರಾಮಸ್ಥರಲ್ಲದೆ, ಕಲ್ಲುಗುಂಡಿಯವರು ಕೂಡಾ ತೆಗೆದುಕೊಂಡು ಹೋಗುತ್ತಿದ್ದರು. ಆರು ತಿಂಗಳ ಹಿಂದೆ ಈ ಘಟಕದ ಶುದ್ಧೀಕರಣದ ಪಂಪ್ ಕಳವಾಗಿದ್ದು, ಈ ಬಗ್ಗೆ ಪಂಚಾಯತ್ನ ಅಧ್ಯಕ್ಷರು ಮತ್ತು ಪಿಡಿಒ ನಿರ್ಣಯ ಮಾಡಿ, ಸಿಬ್ಬಂದಿಗಳ ಮೂಲಕ ಸಂಪಾಜೆ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದರು. ಆದರೆ ಇದುವರೆಗೆ ಪಂಪು ಪತ್ತೆಯಾಗಿಲ್ಲ.
ಇದೀಗ ಈ ಶುದ್ಧ ಕುಡಿಯುವ ನೀರಿನ ಘಟಕದ ಪಂಪು ಕಳವು ವಿಚಾರ ಚೆಂಬು ಗ್ರಾಮದ ಗ್ರಾಮ ವಿಕಾಸ ವಾಟ್ಸಾಪ್ ಗುಂಪಿನಲ್ಲಿ ಚರ್ಚೆಯಾಗತೊಡಗಿತಲ್ಲದೆ,
ಹರೀಶ್ ಊರುಬೈಲು, ನಾಗೇಶ್, ದಿನೇಶ್ ಸಣ್ಣಮನೆ ಮುಂತಾದವರು ಊರವರ ಪರವಾಗಿ ಸಂಪಾಜೆ ಪೋಲೀಸ್ ಠಾಣೆಗೆ ಪಂಪ್ ಕಳವಿನ ಬಗ್ಗೆ ದೂರು ನೀಡಿದ್ದಾರೆ.
” ಪಂಚಾಯತ್ನವರು ಪೋಲೀಸರಿಗೆ ದೂರು ನೀಡಿರುವುದಿಲ್ಲ. ಆದ್ದರಿಂದ ಪತ್ತೆಯಾಗಿಲ್ಲ. ಕಳವಾದ ಪಂಪ್ ಯಾರು ಕೊಂಡೊಯ್ದಿದ್ದಾರೆ ಎಂದು ಊರವರಿಗೆ ತಿಳಿಯಬೇಕು ” ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪಂಚಾಯತ್ ಅಧ್ಯಕ್ಷರನ್ನು ಸಂಪರ್ಕಿಸಿ ವಿಚಾರಿಸಿದಾಗ ” ನಾವು 6 ತಿಂಗಳ ಹಿಂದೆ ಕಳವಾದ ಕೂಡಲೇ ಪಂಚಾಯತ್ನಲ್ಲಿ ಚರ್ಚಿಸಿ, ಕಾರ್ಯದರ್ಶಿ ಕುಮಾರ ಮತ್ತು ಘಟಕದ ನಿರ್ವಾಹಕ ವಿನೋದ್ ಆನೆಹಳ್ಳ ಮೂಲಕ ದೂರು ಕೊಡಿಸಿದ್ದೇವೆ ” ಎಂದು ತಿಳಿಸಿದರು. ಪಂಚಾಯತ್ ನ ಇತರ ಕೆಲವು ಸದಸ್ಯರು ಕೂಡ ಪೋಲೀಸ್ ದೂರು ನೀಡಿರುವುದನ್ನು ದೃಢ ಪಡಿಸಿದ್ದಾರೆ.
ಸಂಪಾಜೆ ಪೋಲೀಸ್ ಹೊರಠಾಣೆಗೆ ದೂರು ಕೊಟ್ಟಾಗ ಪೋಲೀಸರು ಸ್ಥಳಕ್ಕೆ ಬಂದು ನೋಡಿ ಹೋಗಿದ್ದರೆಂದೂ, ಬಳಿಕ ಪಂಚಾಯತ್ ನವರು ಬೆನ್ನು ಬೀಳದ ಕಾರಣ ಪೋಲೀಸ್ ತನಿಖೆ ಪ್ರಗತಿ ಕಂಡಿಲ್ಲವೆಂದೂ ಹೇಳಲಾಗುತ್ತಿದೆ.