ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದಲ್ಲಿ ಪೋಷಣ ಅಭಿಯಾನ ಮಾಸಾಚರಣೆ’ ಕಾರ್ಯಕ್ರಮದ ಅಂಗವಾಗಿ ಆಹಾರಮೇಳ ಮತ್ತು ಮಾಹಿತಿ ಶಿಬಿರವನ್ನು ಸೆ. 7ರಿಂದ 24 ರ ವರೆಗೆ ಆಯೋಜಿಸಲಾಗಿತ್ತು.
ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊಫೆಸರ್ ಸತೀಶ್ ಚಂದ್ರ ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳ ಮತ್ತು ಮಹಿಳೆಯರ ವೈಯಕ್ತಿಕ ಆರೋಗ್ಯ ಸುರಕ್ಷತೆ ಬಗ್ಗೆ ವಿಶೇಷ ಕಾಳಜಿ ವಹಿಸಿ, ಆರೋಗ್ಯವಂತ ಸಮಾಜವನ್ನು ಸೃಷ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಆಹಾರ ವಿಭಾಗದ ಮುಖ್ಯಸ್ಥೆ ಡಾ. ಗೀತಾ ಬಿ.ಶೆಟ್ಟಿ, ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ರೋಶಿತ ಮತ್ತು ರೀತಿ ವಿದ್ಯಾರ್ಥಿಗಳಿಗೆ ಆಹಾರದ ಪೌಷ್ಟಿಕಾಂಶಗಳ ಅಗತ್ಯತೆ ಮತ್ತು ನ್ಯೂನತೆಯಿಂದ ಆಗುವ ಪರಿಣಾಮಗಳನ್ನು ಕುರಿತು ಮಾಹಿತಿ ನೀಡಿದರು.
ಸೆಪ್ಟೆಂಬರ್ 23 ರಂದು ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆಯ ಅಂಗವಾಗಿ ಆಹಾರ ಮೇಳ’ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು ಈ ಆಹಾರ ಮೇಳದಲ್ಲಿ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಗ್ಯಾಸ್ಟೈಟಿಸ್, ಹಾರ್ಮೋನ್ ಗಳ ಅಸಮತೋಲನದಿಂದ ಬರುವ ಆರೋಗ್ಯ ತೊಂದರೆಗಳು ಮತ್ತು ರೋಗ ವಿರೋಧಕ ಶಕ್ತಿಯನ್ನು ಹಚ್ಚಿಸುವ ಆಹಾರಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಶಿಬಿರ ಮತ್ತು ಸಮಾಲೋಚನೆಯನ್ನು ನಡೆಸಿಕೊಡಲಾಯಿತು. ವಿವಿಧ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಅವಶ್ಯಕವಾದ ‘ಆಹಾರ ಪ್ರಾತ್ಯಕ್ಷಿತೆ’ಯನ್ನು ಕೂಡ ಆಯೋಜಿಸಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು ಈ ಆಹಾರ ಮೇಳದಲ್ಲಿ ಪಾಲ್ಗೊಂಡು ಇದರ ಪುಯೋಜನವನ್ನು ಪಡೆದುಕೊಂಡರು. ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ, ಆಹಾರ ವಿಭಾಗದ ಮುಖ್ಯಸ್ಥೆ ಮತ್ತು ಡೀನ್ ಡಾ. ಗೀತಾ ಬಿ ಶೆಟ್ಟಿ, ಉಪನ್ಯಾಸಕರಾದ ಡಾ. ಶಾಲ್ಮಲಿ, ಡಾ. ಪ್ರಿಯದ ಮತ್ತು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸಹಕಾರದೊಂದಿಗೆ ಈ ಆಹಾರಮೇಳವು ಯಶಸ್ವಿಯಾಗಿ ಹೊರಹೊಮ್ಮಿತು.