Site icon Suddi Belthangady

ಬೆನಕ ಆಸ್ಪತ್ರೆ ರಜತ ಸಂಭ್ರಮ – ಆಧುನಿಕ ತಂತ್ರಜ್ಞಾನದ ವಿಸ್ತ್ರತ ನೂತನ ಕಟ್ಟಡ – ಪತ್ರಿಕಾಗೋಷ್ಠಿ

ಉಜಿರೆ: “ರೋಗಿಗಳ ಸೇವೆಗೆ ಕೇಂದ್ರೀಕೃತವಾಗಿ ಅತ್ಯುತ್ತಮ ದರ್ಜೆಯ ಆರೋಗ್ಯ ಶುಶೂಷೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಆಸ್ಪತ್ರೆಯಾಗಿ ಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ” ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ. ಹೇಳಿದರು.

ಜ 16 ರಂದು ಪತ್ರಿಕಾ ಗೋಷ್ಠಿ ನಡೆಸಿದ ಅವರು, ಕೇವಲ 7 ಹಾಸಿಗೆಗಳ 2 ವೈದ್ಯರು ಹಾಗೂ 2 ದಾದಿಯರಿಂದ 2000 ರಲ್ಲಿ ಆರಂಭವಾದ ಬೆನಕ ಆಸ್ಪತ್ರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಸ್ಥಳೀಯ ಅಗತ್ಯಗಳನ್ನು ಮನಗಂಡು ಸಣ್ಣಮಟ್ಟದಲ್ಲಿ ಆರಂಭವಾದ ಆಸ್ಪತ್ರೆ ಇದೀಗ 130 ಹಾಸಿಗೆಗಳ ಮಲ್ಟಿ – ಸ್ಪೆಷಾಲಿಟಿ ಅರೋಗ್ಯ ಸೇವೆಗಳನ್ನೊಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಗುಣಮಟ್ಟದ ಸಮಕಾಲೀನ ಆರೋಗ್ಯ ಸೇವೆಯನ್ನು ನೀಡುವ ಹಾಗೂ ಜನರ ಆಯ್ಕೆಯ ಆಸ್ಪತ್ರೆಯಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದೇವೆ. ಪ್ರತಿ ವರ್ಷ ಕೂಡ ಯಾವುದಾದರೊಂದು ಹೊಸ ಸೇವೆಯನ್ನು ಆರಂಭಿಸುತ್ತಾ ಬಂದಿದ್ದೇವೆ” ಎಂದು ಹೇಳಿದರು.

ಇನ್ನು ಬೆನಕ ಆಸ್ಪತ್ರೆಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ವಿಸ್ತ್ರತ ನೂತನ ಕಟ್ಟಡ ಕಾಮಗಾರಿ ಕೂಡ ಮುಗಿದಿದ್ದು, ಇದರ ಉದ್ಘಾಟನೆ ಜ. 18 ರಂದು ನಡೆಯಲಿದೆ.

ಬೆನಕ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮವನ್ನು ರಾಜ್ಯ ಸಭಾಪತಿ ಯು. ಟಿ. ಖಾದರ್ ಉದ್ಘಾಟಿಸಲಿದ್ದು, ನೂತನ ಕಟ್ಟಡದ ಉದ್ಘಾಟನೆ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಲೋಕಸಭಾ ಸದಸ್ಯ ಕ್ಯಾಪ್ಶನ್ ಬ್ರಿಜೇಶ್ ಚೌಟ ತುರ್ತು ಚಿಕಿತ್ಸಾ ವಿಭಾಗವನ್ನು ಲೋಕಾರ್ಪಣೆ ಮಾಡಲಿದ್ದು, ಡೇ ಕೇರ್ ವಿಭಾಗವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಮಕ್ಕಳ ವಾರ್ನ್ನು ಅರೆ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ. ಯು. ಟಿ. ಇಫ್ತಿಕರ್ ಅಲಿ ಉದ್ಘಾಟಿಸಲಿದ್ದಾರೆ. ಇನ್ನು ಮುಖ್ಯ ಅಥಿತಿಗಳಾಗಿ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್‌ ಕಾರಂತ, ಉಪಾಧ್ಯಕ್ಷ ರವಿಕುಮಾ‌ರ್ ಬರೆಮೇಲು ಭಾಗವಹಿಸಲಿದ್ದು ಸೀತಾರಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಸ್ತ್ರತ ನೂತನ ಕಟ್ಟಡದಲ್ಲಿ ಯಾವ ಸೇವೆ ಲಭ್ಯ

ಬೆನಕ ಹೆಲ್ತ್ ಕೇರ್ ,

ಬೆನಕ ಸಭಾಭವನ,

ಅತ್ಯಾಧುನಿಕ ಗ್ಯಾಸ್ಟೋಎಂಡೋಸ್ಕೋಪಿಕ್ ಉಪಕರಣ,

ಆಧುನಿಕ ಆಲ್ಮಾ ಸೌಂಡ್ ಮತ್ತು ಡಿಜಿಟಲ್ ಎಕ್ಸರೇ ,

ಸಿ.ಟಿ ಸ್ಕ್ಯಾನ್,

ತುರ್ತು ಚಿಕಿತ್ಸಾ ವಿಭಾಗ,

ಅಪರೇಷನ್ ಥಿಯೇಟರ್,

ತೀವ್ರ ನಿಗಾ ಘಟಕ,

ಮೈಕ್ರೋ ಸರ್ಜರಿ ಸೇವೆ,

ಕೀಹೋಲ್ ಶಸ್ತ್ರಚಿಕಿತ್ಸೆ,

ಕಣ್ಣಿನ ಶಸ್ತ್ರಚಿಕಿತ್ಸೆ,

ವಿಶೇಷ ಸೌಲಭ್ಯ ಇರುವ ಮಕ್ಕಳ ಚಿಕಿತ್ಸಾ ಘಟಕ,

ವಿಶಾಲವಾದ ಕ್ಯಾಂಟೀನ್

ಈ ಪತ್ರಿಕಾ ಗೋಷ್ಠಿಯಲ್ಲಿ ಡಾ. ಭಾರತಿ ಜಿ. ಕೆ., ಡಾ. ಆದಿತ್ಯ ರಾವ್, ಡಾ. ಅಂಕಿತ ಜಿ ಭಟ್, ಡಾ. ರೋಹಿತ್ ಜಿ. ಭಟ್ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಎಸ್. ಜಿ. ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು..

Exit mobile version