ವೇಣೂರು: ಅಜಿಲಸೀಮೆಯ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಖ್ಯಾತ ದೈವಜ್ಞ ನೆಲ್ಯಾಡಿ ಶ್ರೀಧರ ಗೋರೆ ಅವರಿಂದ ತಾಂಬೂಲ ಪ್ರಶ್ನೆ ಚಿಂತನೆಯು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇಗುಲದಲ್ಲಿ ಈ ವರೆಗೆ ನಡೆದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಹಾಗೂ ಮುಂದೆ ನಡೆಯಲಿರುವ ಕಾರ್ಯಗಳ ಬಗ್ಗೆ ಪ್ರಶ್ನೆ ಚಿಂತನೆ ನಡೆಸಲಾಯಿತು. ಈ ಸಂದರ್ಭ ದೈವಜ್ಞರು ದೇಗುಲದ ಅಭಿವೃದ್ಧಿ ಕಾರ್ಯದಲ್ಲಿ ಕೆಲವೊಂದು ಮಾರ್ಪಾಟು ಮಾಡುವಂತೆ ಸೂಚಿಸಿದರು.
ಈಗಾಗಲೇ ಜೀರ್ಣೋದ್ಧಾರ ಕಾರ್ಯದ ಶೇ. 70ರಷ್ಟು ಕೆಲಸಗಳು ನಡೆದಿದ್ದು, 2023ರ ಫೆಬ್ರವರಿ ವೇಳೆಗೆ ಜೀಣೋದ್ಧಾರ ಕಾರ್ಯ ಪೂರ್ಣಗೊಂಡು ಬ್ರಹ್ಮಕಲಶ ನಡೆಸುವ ಬಗ್ಗೆ ಚಿಂತಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಅವರು ಈ ಸಂದರ್ಭ ಆಶಯ ವ್ಯಕ್ತಪಡಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ತಾಂತ್ರಿಕ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.