ಡಾ. ಯಶೋವರ್ಮ 70ರ ಜನ್ಮಸ್ಮರಣೆ-ವಿಧೇಯತೆ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ ಆದರ್ಶ ವ್ಯಕ್ತಿ ಡಾ. ಯಶೋವರ್ಮ-ಸೋನಿಯಾ ವರ್ಮ

0

ಉಜಿರೆ: ಪುಸ್ತಕ ವಾಚನ ಅಂದರೆ ಯಶೋವರ್ಮ ಅವರಿಗೆ ಅಪಾರವಾದ ಆಸಕ್ತಿ ಇತ್ತು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದಲು ಉತ್ತೇಜನ ನೀಡುವ ಉದ್ದೇಶದಿಂದ ಲೈಬ್ರರಿಯಲ್ಲಿ ಕಡ್ಡಾಯ ಓದು ನಿಯಮವನ್ನೂ ಜಾರಿಗೊಳಿಸಿದ್ದರು. ವಿಶೇಷವಾಗಿ ಟೆನ್ನಿಸ್ ಆಟದಲ್ಲಿ ಅವರಿಗೆ ವಿಶೇಷ ಆಸಕ್ತಿ ಹಾಗೂ ಪ್ರಕೃತಿ, ಹಸಿರು ತೋಟಗಳು ಇವರಿಗೆ ಬಹಳ ಇಷ್ಟ. ಸಂಸ್ಥೆಯಲ್ಲಿ ವೃಕ್ಷೋದ್ಯಾನ ನಿರ್ಮಿಸುವ ಕಲ್ಪನೆ ಅವರದ್ದೇ ಆಗಿತ್ತು. ಶಿಸ್ತಿನಲ್ಲೂ ಕಠಿಣತೆಯಲ್ಲೂ ಅವರು ಮಾದರಿಯಾಗಿದ್ದವರು. ಸಂಸ್ಕೃತ ಭಾಷೆಯ ಮೇಲೂ ಅವರಿಗೆ ಅಪಾರ ಪ್ರೀತಿ. ಸಂಸ್ಕೃತ ಸಂಬಂಧಿಸಿದ ಪುಸ್ತಕಗಳು, ಶ್ಲೋಕಗಳನ್ನು ಓದುವ ಹವ್ಯಾಸ ಕೂಡ ಇತ್ತು. ವಿದ್ಯಾರ್ಥಿಗಳಿಗೆ ಸವಿನಯವಾಗಿ ಮಾತನಾಡುವುದು, ಸಾಮಾಜಿಕ ಜವಾಬ್ದಾರಿ, ನಾಗರಿಕ ಸಂವೇದನೆ ಇತ್ಯಾದಿಗಳನ್ನು ಅವರು ಸದಾ ಬೋಧಿಸುತ್ತಿದ್ದರು. ಒಟ್ಟಿನಲ್ಲಿ ಅವರು ಒಬ್ಬ ವಿಧೇಯತೆ ಮತ್ತು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ ಆದರ್ಶ ವ್ಯಕ್ತಿಯೂ ಆಗಿದ್ದರು ಎಂದು ಸೋನಿಯಾ ವರ್ಮ ಹೇಳಿದರು.

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಪ್ರಾಕ್ತನ ಕಾರ್ಯದರ್ಶಿ ದಿವಂಗತ ಯಶೋವರ್ಮ ಅವರ ಎಪ್ಪತ್ತರ ಜನ್ಮದಿನದ ಸ್ಮರಣೆಯ ಅಂಗವಾಗಿ ಅವರ ಮನೆಯ ಬಳಿ ಇರುವ ಸ್ಮಾರಕದ ಮುಂದೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಸಂಘದಿಂದ ಸಂಸ್ಕೃತ ಭಾಷಾ ವಿದ್ಯಾರ್ಥಿಗಳು ರಚಿಸಿದ ಎಪ್ಪತ್ತು ಭಿತ್ತಿಪತ್ರಿಕೆಗಳನ್ನು ಅನಾವರಣ ಮಾಡಿ ಮಾತನಾಡಿದರು.

ಯುಶೋವರ್ಮ ಅವರ ಸ್ಮರಣೆಯಲ್ಲಿ ‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದಿಲ್ಲ’ ಎಂಬ ಪ್ರತಿಜ್ಞೆ ಸ್ವೀಕರಿಸಲು ಕರೆ ನೀಡಿದರು. ಡಿಜಿಟಲ್ ಪತ್ರಿಕೆಯನ್ನು ಬಿಡುಗಡೆ ಮಾಡಿದ ಎಸ್ ಡಿ ಎಂ ಸಂಸ್ಥೆಗಳ ಐಟಿ ಹಾಗೂ ವಸತಿ ನಿಲಯಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಪೂರನ್ ವರ್ಮ ಅವರು ತಂದೆಯವರ ಹಲವು ಕುತೂಹಲಭರಿತ ವಿಚಾರಗಳನ್ನು ಹಂಚಿಕೊಂಡರು. ಕೇಯೂರ ವರ್ಮ, ಎಸ್. ಡಿ. ಎಂ ಕಲಾಕೇಂದ್ರದ ವ್ಯವಸ್ಥಾಪಕ ತೃಪ್ತ ಜೈನ್, ಮಾಧ್ಯಮಗಳ ಸಂಯೋಜಕ ಅರವಿಂದ್ ಅವರು ಉಪಸ್ಥಿತರಿದ್ದರು.

ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಗತಿ ಶೇಟ್, ರಾಮಕಿಶೋರ್ ಹಾಗೂ ಕಾರ್ತಿಕ್ ಡಿ.ಎಂ. ಗೌರವಿಸಿದರು. ಟಿ.ಪಿ. ಹಿತಾ ಸ್ವಾಗತಿಸಿ, ಅಂಜನಾ ಎಂ.ಆರ್ ನಿರೂಪಿಸಿದರು. ಸಮನ್ವಿತಾ ವಂದಿಸಿದರು.

LEAVE A REPLY

Please enter your comment!
Please enter your name here