ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಸೆ.22ರಂದು ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಹಾಗೂ ಎ.ಜೆ.ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಸಿಯೋನ್ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ಡಾ.ಯು.ಸಿ.ಪೌಲೋಸ್ ಅವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿಕೊಂಡು, “ಇಂತಹ ಆರೋಗ್ಯ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿರುವ ನಮ್ಮಆಶ್ರಮ ನಿವಾಸಿಗಳಿಗೆ ತುಂಬಾ ಉಪಯುಕ್ತವಾಗುತ್ತವೆ.” ಎಂದು ಶುಭ ಹಾರೈಸಿದರು.

ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ನ ಅಧ್ಯಕ್ಷ ಆಂಟನಿ ಒಲಿವೆರಾ ಅವರು “ಸೇವೆಯೇ ನಮ್ಮ ಧ್ಯೇಯ. ಇಂತಹ ಶಿಬಿರಗಳು ಜನರ ಜೀವನಕ್ಕೆ ಆಶಾಕಿರಣ ತರುತ್ತವೆ. ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಲಿ ಎಲ್ಲರೂ ಆರೋಗ್ಯವಾಗಿರಲಿ” ಎಂದು ಹೇಳಿದರು.

ಎ.ಜೆ.ಆಸ್ಪತ್ರೆ ಹಾಗೂ ಮಂಗಳೂರು ಸಂಶೋಧನಾ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ.ಮೆಘನ್ ಹಾಗೂ ಎ.ಜೆ.ಅಸ್ಪತ್ರೆಯ ವೈದ್ಯರ ತಂಡ ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿದರು. 294ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಂಸ್ಥೆಯ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ., ಸಂಸ್ಥೆಯ ಆಡಳಿತಾಧಿಕಾರಿ ಶೋಭಾ ಯು.ಪಿ., ಲಯನ್ಸ್ ಕ್ಲಬ್ ಮಾರ್ಗದರ್ಶಕ ಲ್ಯಾನ್ಸಿ ಮಸ್ಕರೇನಸ್, ಸಂಸ್ಥೆಯ ವೈದ್ಯಾಧಿಕಾರಿ ಡಾ.ಶಿವಾನಂದಸ್ವಾಮಿ, ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಆಶಾ ಸುಧಾಕರ್ ಅವರು ಕಾರ್ಯಕ್ರಮ ನಿರೂಪಿಸಿದರು.