ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಮತ್ತು ಪ್ರಗತಿ ಸ್ವ -ಸಹಾಯ ಸಂಘ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಪ್ರಾಂಶುಪಾಲರಿಗೆ ಹಾಗೂ 2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವು ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಅವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಮುದಾಯ ಭವನ ಹಳೇಕೋಟೆ ಬೆಳ್ತಂಗಡಿಯಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ವಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ. ಯದುಪತಿ ಗೌಡ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಡೆದು ಬಂದ ಹಾದಿಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬಗ್ಗೆ ತಮ್ಮ ಮಾತುಗಳಲ್ಲಿ ಪ್ರಸ್ತುತಪಡಿಸಿದರು.
ಪ್ರಾಂಶುಪಾಲರ ಸಂಘದಿಂದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮಹಾಬಲ ಗೌಡ ಇವರನ್ನು ಸನ್ಮಾನಿಸಲಾಯಿತು.
ಪ್ರೌಢ ಶಾಲಾ ವಿಭಾಗದಲ್ಲಿ 2025ರ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೊಯ್ಯೂರಿನ ವಿಜಯ ಕುಮಾರ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ 2025ರ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಜಿರೆಯ ಜಯ ಕೆ. ಅವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಮೂವರು ಸಾಧಕರು ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ತಾವು ನಡೆದು ಬಂದ ಹಾದಿಯ ಬಗ್ಗೆ ಮನದಾಳದ ಮಾತುಗಳನ್ನಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಅವರು ವಹಿಸಿ ನಮ್ಮ ಸಮಾಜದ ಸಾಧನೆ ಮಾಡಿದ ವ್ಯಕ್ತಿಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ, ಇಂತಹ ಕಾರ್ಯಕ್ರಮ ನಮ್ಮ ಸಮಾಜದ ಇನ್ನಷ್ಟು ಬಂಧುಗಳು ಸಾಧನೆ ಮಾಡಲು ಸ್ಫೂರ್ತಿಯಾಗಬೇಕು ಎಂಬ ಉದ್ದೇಶದಿಂದ ನಾವು ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ, ಮಂದಿನ ದಿನಗಳಲ್ಲಿ ನಮ್ಮ ಸಮಾಜದ ಬಂಧುಗಳಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವವರಿದ್ದೇವೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ವೇದಿಕೆಯಲ್ಲಿ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷರಾದ ಗೀತಾ ರಾಮಣ್ಣ ಗೌಡ ಕೊಯ್ಯೂರು, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸೀತಾರಾಮ ಬೆಳಾಲು, ಪ್ರಗತಿ ಸ್ವ-ಸಹಾಯ ಸಂಘ ಬೆಳ್ತಂಗಡಿ ಇದರ ಸ್ಥಾಪಕ ಅಧ್ಯಕ್ಷರಾದ ಮೋಹನ್ ಗೌಡ ಕೊಯ್ಯೂರು ಉಪಸ್ಥಿತರಿದ್ದರು. ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇದರ ಸಂಚಾಲಕ ಸೀತಾರಾಮ ಗೌಡ ಬೆಳಾಲು ಕಾರ್ಯಕ್ರಮದ ಸ್ವಾಗತ ಭಾಷಣವನ್ನು ನೆರವೇರಿಸಿದರು. ಬೆಳ್ತಂಗಡಿ ಪ್ರಗತಿ ಸ್ವ- ಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಮೋಹನ ಗೌಡ ಕೊಯ್ಯೂರು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಛಾಯಾಗ್ರಾಹಕರಾಗಿ ಯುವ ವೇದಿಕೆಯ ಉಪಾಧ್ಯಕ್ಷ ನಿತಿನ್ ಕಲ್ಮಂಜ ಸಹಕರಿಸಿದರು.
ಯುವ ವೇದಿಕೆಯ ಸಲಹೆಗಾರ ಮೋಹನ ಗೌಡ ಕೊಯ್ಯೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಕೋಶಾಧಿಕಾರಿ ರಂಜಿತ್ ಕಳೆಂಜ, ಜೊತೆ ಕಾರ್ಯದರ್ಶಿ ತೀಕ್ಷಿತ್ ದಿಡುಪೆ, ಉಪಾಧ್ಯಕ್ಷ ನಿತಿನ್ ಕಲ್ಮಂಜ, ಕಾನೂನು ಸಲಹೆಗಾರ ನವೀನ್ ನಿಡ್ಲೆ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ದಿಡುಪೆ, ಯಶವಂತ ಡೆಚ್ಚಾರು, ಭರತ್ ಪುದುವೆಟ್ಟು, ಸತೀಶ್ ಬೆಳಾಲು, ಪ್ರದೀಪ್ ನಾಗಾಜೆ, ಅಕ್ಷಯ್ ಉಜಿರೆ, ಪ್ರಸಾದ್ ಚಾರ್ಮಾಡಿ, ಮಂಜುನಾಥ ಚಾರ್ಮಾಡಿ, ಸಚಿನ್ ಕನ್ಯಾಡಿ, ಶಿವಪ್ರಸಾದ್ ಕಲ್ಮಂಜ, ನಿತೇಶ್ ಬೆಳ್ತಂಗಡಿ, ಸೀತಾರಾಮ್ ಬೆಳಾಲು, ಧನಂಜಯ್ ಕುಮಾರ್ ಪೆರ್ಲ, ಚಿದಾನಂದ ಗೌಡ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕಲ್ಮಂಜ ಘಟಕದ ಗೌರವಾಧ್ಯಕ್ಷರಾದ ರಮೇಶ್ ಗೌಡ ಗುಲ್ಲೋಡಿ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾರಾಮಣ್ಣ ಗೌಡ, ಕಾರ್ಯದರ್ಶಿ ಲೀಲಾ ಬೆಳಾಲು, ದಯಾಮಣಿ ಕೊಯ್ಯೂರು, ಮೀನಾಕ್ಷಿ ಮಹಾಬಲ ಗೌಡ ಕುವೆಟ್ಟು, ವಾಣಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಉಮೇಶ್, ಸಿಬ್ಬಂದಿಗಳಾದ ಚರಣ್, ಪ್ರೋಕ್ಷಿತ್, ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ್ ಬೆಳಾಲು ನಿರ್ವಹಿಸಿದರು. ಧನ್ಯವಾದವನ್ನು ಯುವ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ ನೆರವೇರಿಸಿದರು.