
ಉಜಿರೆ: ಶ್ರೀ. ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ. ಗದ್ದೆ, ಭತ್ತ, ಅಕ್ಕಿಯ ಮಹತ್ವವನ್ನು ಯುವಜನತೆಗೆ ತೋರಿಸಿಕೊಡುವ ನಿಟ್ಟಿನಲ್ಲಿ “ ಯುವ ಸಿರಿ, ರೈತ ಭಾರತದ ಐಸಿರಿ ” ಎಂಬ ಹೆಸರಿನಡಿಯಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಜೊತೆಯಲ್ಲಿ ಶ್ರೀ. ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಮತ್ತು ಇನ್ನಿತರ ಸಂಘ ಸಂಸ್ಥೆಗಳು ಒಟ್ಟು ಸೇರಿ ಅ.24, 2024ರಂದು ಅನಂತೋಡಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ 4.3೦ ಎಕರೆ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ ನೆರವೇರಿಸಿದರು.

ಏಕಕಾಲದಲ್ಲಿ ಇಷ್ಟು ಜನರೊಡಗೂಡಿ ನೆರವೇರಿಸಿದ ಈ ನಾಟಿ ಕಾರ್ಯಕ್ರಮವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ. ಈಗಾಗಲೇ ವಿಶ್ವವಿದ್ಯಾನಿಲಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುಮಾರು 54 ಪ್ರಶಸ್ತಿಗಳನ್ನು ಸ್ವೀಕರಿಸಿದ ಎಸ್. ಡಿ. ಎಂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಕುಟಕ್ಕೆ ಇನ್ನೊಂದು ಪ್ರತಿಷ್ಠಿತ ಗರಿಮೆ ಸೇರ್ಪಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 200 ರಾ.ಸೇ.ಯೋ ಸ್ವಯಂ ಸೇವಕರು ಭಾಗಿಯಾಗಿದ್ದರು.

ಈ ಪ್ರತಿಷ್ಠಿತ ಪ್ರಶಸ್ತಿಯ ಫಲಕವನ್ನು ಕರ್ನಾಟಕ ರಾಜ್ಯದ ಎನ್.ಎಸ್.ಎಸ್ ಕೋಶಾಧಿಕಾರಿ ಪ್ರತಾಪ್ ಲಿಂಗಯ್ಯ, ಕಾಲೇಜಿನ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಹಾಗೂ ಸ್ವಯಂ ಸೇವಕರಿಗೆ ಹಸ್ತಾಂತರಿಸಿದರು. ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು. ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಕಾಲೇಜಿನ ಎನ್.ಎಸ್.ಎಸ್ ಘಟಕಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದರು.