ಗುರುವಾಯನಕೆರೆ: 2024-25 ನೇ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ವತ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ, ಇದೇ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿ.ಯು.ಸಿ ಕಾರ್ಯಾರಂಭ ಮಾಡಿದ್ದು, ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಪರೀಕ್ಷೆಗಳ ತರಬೇತಿ ನೀಡಿ ಪರೀಕ್ಷೆ ಬರೆಯಿಸಲಾಗಿತ್ತು. ಅದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗಮನ ಸೆಳೆಯುವ ಫಲಿತಾಂಶ ಪಡೆದಿದ್ದು, ಗುರುವಾಯನಕೆರೆಯ ಎಲ್ಲಾ ಶಿಕ್ಷಣ ಪ್ರೇಮಿಗಳು ಹೆಮ್ಮೆ ಪಡುವ ವಿಚಾರವಾಗಿದೆ.
ಅಂತರಾಷ್ಟ್ರೀಯ ಮ್ಯಾನ್ಸ್ ಸೈನ್ಸ್ ಹಾಗೂ ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಒಟ್ಟು 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಸ್ವರ್ಣ ಪದಕಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಸಕ್ತರ ಗಮನವನ್ನು ವಿದ್ವತ್ ಪಿ.ಯು ನಡೆಗೆ ಸೆಳೆದಿದ್ದರೆ, ರಾಷ್ಟ್ರೀಯ ಸೈನ್ಸ್ ಒಲಿಂಪಿಯಾಡ್, ಮ್ಯಾಕ್ಸ್, ಹಾಗೂ ಅಂತರಾಷ್ಟ್ರೀಯ ಇಂಗ್ಲೀಷ್ ಒಲಿಂಪಿಯಾಡ್ ನಲ್ಲಿ 6 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಇಂಗ್ಲಿಷ್ ಒಲಿಂಪಿಯಾಡ್ ನಲ್ಲಿ ನೇಹಾ ಭಟ್, ಭುವನ್ ತೇಜ್, ನೀತುಶ್ರೀ, ಸೈನ್ಸ್ ಒಲಿಂಪಿಯಾಡ್ ನಲ್ಲಿ, ಮನೋಜ್ ಎಚ್. ಕೆ ಪ್ರೇಕ್ಷಿತ್ ಕೆ., ಕೆ. ಎನ್. ವಿನಯ್ ಶ್ಯಾಮ್, ಮ್ಯಾನ್ಸ್ ಒಲಿಂಪಿಯಾಡ್ ನಲ್ಲಿ ರಾಹುಲ್ ಸ್ವಾಮಿ, ಚಿನ್ಮಯ್ ಜಿ.ಕೆ., ಪಿ. ವಿ. ಪ್ರಣಮ್, ಅಜಿತ್ ಎಚ್. ಸಿ. ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ.
ಭಾರತೀಯ ಒಲಿಂಪಿಯಾಡ್ ಸಂಸ್ಥೆಯು ವಿದ್ವತ್ ಪಿ.ಯು ಕಾಲೇಜಿನ ಸಾಧನೆಯನ್ನು ಗುರುತಿಸಿ ಪ್ರಶಂಸನಾ ಪತ್ರವನ್ನು ಕೂಡ ರವಾನಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ವ್ಯವಸ್ಥಿತ ಸಾಧಕ ಮಾದರಿ ಪರಿಚಯಿಸಿರುವ ವಿದ್ವತ್ ಪಿ.ಯು ಒಲಿಂಪಿಯಾಡ್ ಪರೀಕ್ಷಾ ಸಾಧನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಮೂಡಿಸುವತ್ತ ದಾಪುಗಾಲಿಡುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.