ಪತ್ರಿಕಾಗೋಷ್ಠಿ: ಡಿ.16ರಂದು ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳವಳಿ 50ರ ಸಂಭ್ರಮಾಚರಣೆ

0

ಬೆಳ್ತಂಗಡಿ: ಕರ್ನಾಟಕ ದಲಿತ ಚಳವಳಿಗೆ 50 ವರ್ಷ ತುಂಬಿದ ಅಂಗವಾಗಿ ಡಿ.16ರಂದು 50ರ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಚರಣಾ ಸಮಿತಿ ಅಧ್ಯಕ್ಷ ಬಿ.ಕೆ. ವಸಂತ ಹೇಳಿದರು.

ಅವರು ಸೆ.25ರಂದು ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. 70ರ ದಶಕದ ಆರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳವಳಿಗೆ ಅರ್ಧ ಶತಮಾನ ತುಂಬುತ್ತಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚಿಂತನೆ ನಡೆದಿದ್ದು, ಸಮುದಾಯ ಪಕ್ಷ, ಸಂಘಟನೆಗಳ ಭೇದವಿವ‌ಲ್ಲದೆ ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮದಲ್ಲಿ ತಾಲೂಕಿನ ದಲಿತ ಚಳವಳಿ ನಡೆದು ಬಂದ ಹಾದಿಯ ಅವಲೋಕನ ನಡೆಯಲಿದೆ. ಬೃಹತ್ ಮೆರವಣಿಗೆ, ಸಮಾವೇಶದ ಮೂಲಕ ಸಂಭ್ರಮಾಚರಣೆ ಜೊತೆಗೆ ತಾಲೂಕಿನಾದ್ಯಂತ ದಲಿತ ಚಳವಳಿಯನ್ನು ಕಟ್ಟಲು ಶ್ರಮಿಸಿ ಅಗಲಿ ಹೋದ ಅನೇಕ ಹಿರಿಯ ಚೇತನಗಳ ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ. ಇದರ ಮೊದಲ ಹಂತದಲ್ಲಿ ಅ.20ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಸಂಘಟನೆಯ ಬೆಳವಣಿಗೆ: ಅಂದು 50 ವರ್ಷಗಳ ಹಿಂದೆ ನಾಡಿನ ಸಮಕಾಲೀನ ಪ್ರಗತಿಪರ ಸಮಾನಮನಸ್ಕ ಚಿಂತಕರು, ಸಾಹಿತಿಗಳು, ಲೇಖಕರು, ಪತ್ರಕರ್ತರು, ಹೋರಾಟಗಾರರ ಚಿಂತನೆಯ ಫಲವೆಂಬಂತೆ ಪ್ರೊ.ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ವಾಭಿಮಾನಿ ಹೋರಾಟದ ಬೀಜವನ್ನು ಮೂಲತಃ ಹಾಸನ ಜಿಲ್ಲೆಯವರಾದ ಬಿಲ್ಲವ ಸಮುದಾಯದ ಸೋಮಶೇಖರ ದಕ್ಷಿಣ ಕನ್ನಡದ ನೆಲದಲ್ಲಿ ಬೆರಳೆಣಿಕೆಯ ಸಮಾನ ಮನಸ್ಕ ದಲಿತ ಗೆಳೆಯರೊಂದಿಗೆ ಸೇರಿಕೊಂಡು ದಲಿತ ಮಿತ್ರರನ್ನು ಸಂಘಟಿಸುವ ಮೂಲಕ ಸಮಿತಿಯನ್ನು ಪರಿಚಯಿಸಿದವರಲ್ಲಿ ಮೊದಲಿಗರು.

ಹಲವು ಕಾರ್ಯಕ್ರಮ: ಐದು ದಶಕಗಳ ದಲಿತ ಚಳವಳಿಯು ಮೂಡಿಸಿದ ಜಾಗೃತಿ, ಸ್ವಾಭಿಮಾನ, ಧೈರ್ಯ ಮತ್ತು ಕಲಿಸಿಕೊಟ್ಟ ಒಗ್ಗಟ್ಟಿನ ಪಾಠ, ಹಚ್ಚಿದ ಹೋರಾಟದ ಕಿಚ್ಚು ಹಾಗೂ ಸೈದ್ಧಾಂತಿಕ ಪ್ರಜ್ಞೆಯನ್ನು ಮುಂದಿನ ಯುವ ಪೀಳಿಗೆಗೂ ರೋಮಾಂಚಕ ಸ್ಫೂರ್ತಿಯೊಂದಿಗೆ ಹಸ್ತಾಂತರಿಸಬೇಕಾಗಿದೆ. ದಲಿತ ಚಳವಳಿ, ಚಾರಿತ್ರಿಕ ಹೋರಾಟದ ಹಾದಿಯ ಏಳು-ಬೀಳುಗಳ ಅವಲೋಕನಕ್ಕೆ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ದಲಿತ ಚಳವಳಿಯ 50ರ ಸಂಭ್ರಮದಲ್ಲಿ ವಿಚಾರ ಸಂಕಿರಣ, ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ಕೆ. ವಸಂತ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಸಲಹೆಗಾರ ರಘು ಧರ್ಮಸೇನ್, ಗೌರವಾಧ್ಯಕ್ಷ ಚೆನ್ನಕೇಶವ, ಕಾರ್ಯಾಧ್ಯಕ್ಷರಾದ ಎಸ್.ಬೇಬಿ ಸುವರ್ಣ, ಶೇಖರ ಕುಕ್ಕೇಡಿ, ನೇಮಿರಾಜ್ ಕಿಲ್ಲೂರು, ಸಂಜೀವ ಆರ್. ಬೆಳ್ತಂಗಡಿ, ರಮೇಶ್ ಆರ್. ಬೆಳ್ತಂಗಡಿ, ಉಪಾಧ್ಯಕ್ಷರಾದ ಜಯಾನಂದ ಪಿಲಿಕಲ, ವೆಂಕಣ್ಣ ಕೊಯ್ಯೂರು, ಪಿ.ಕೆ.ರಾಜು ಪಡಂಗಡಿ, ರವಿ ಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗೌರವ ಸಲಹೆಗಾರರಾದ ಈಶ್ವರ ಬೈರ, ಪದ್ಮನಾಭ ಗರ್ಡಾಡಿ, ಬಾಬು ಎಂ. ಬೆಳಾಲು, ಕಾರ್ಯದರ್ಶಿಗಳಾದ ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ, ಮಾಧ್ಯಮ ಸಲಹೆಗಾರ ಶೇಖರ ಎಲ್. ಲಾಯಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here