ಕನ್ಯಾಡಿ ಸೇವಾಭಾರತಿ ಮತ್ತು ಉಡುಪಿ ದಿವ್ಯಾಂಗ ರಕ್ಷಣಾ ಸಮಿತಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸಮಾವೇಶ-2024 ಹಾಗೂ 26ನೇ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ, ಜಾಗೃತಿ ಶಿಬಿರ

0

ಬೆಳ್ತಂಗಡಿ: ಸೇವಾಭಾರತಿ ಕನ್ಯಾಡಿ ಮತ್ತು ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಇವುಗಳ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿಶೇಷಚೇತನರ ಸಬಲೀಕರಣ ಇಲಾಖೆಗಳ ಸಹಕಾರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ 3 ದಿನಗಳ ಉಡುಪಿ ಜಿಲ್ಲಾ ಸಮಾವೇಶ-2024 ಮತ್ತು 26ನೇ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರದ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 4ರಂದು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಶೋಕ್ ಎಚ್ ಉದ್ಘಾಟಿಸಿ, ಅಂಗವಿಕಲರ ಪ್ರಮಾಣ ಪತ್ರವನ್ನು ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ವಿತರಿಸಲಾಗುತ್ತಿತ್ತು. ಇದೀಗ ತಾಲೂಕು ಆಸ್ಪತ್ರೆಗಳಲ್ಲಿಯೂ ವೈದ್ಯರ ಪ್ರಮಾಣ ಪತ್ರ ನೀಡಲು ಕ್ರಮವಹಿಸಲಾಗಿದೆ. ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 160 ಮಂದಿ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದವರಲ್ಲಿ ಆತ್ಮಸ್ಥೈರ್ಯವನ್ನು ಇನ್ನಷ್ಟು ಹೆಚ್ಚು ಮಾಡಿ ಅವರಿಗೆ ದೈರ್ಯ ತುಂಬಾ ಬೇಕು ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಿಎ ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಸಂಸ್ಥೆಯ ಸೇವಾ ಕಾರ್ಯಗಳ ನಿರಂತರತೆ ಮತ್ತು ಪಾರದರ್ಶಕತೆಯನ್ನು ಶ್ಲಾಘಿಸಿದರು.

ಉಡುಪಿ ಜಿಲ್ಲೆಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಯಾಗಿರುವ ರತ್ನ ಸುವರ್ಣ ಸೇವಾಭಾರತಿ ವತಿಯಿಂದ ನೀಡಿದ್ದ ಮನವಿಯನ್ನು ಸ್ವೀಕರಿಸಿ ಬೆನ್ನುಮರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರಿಗೆ ಮಾಸಾಸನ ರೂ. 5000, ವಿಕಲಚೇತನರಿಗೆ ಚೈತನ್ಯ ಗಾಲಿಕುರ್ಚಿ ನೀಡುವಂತೆ ಹಾಗೂ ಆರೈಕೆದಾರರಿಗೆ ಭತ್ಯೆ ಸಂಬಂಧಿಸಿದಂತೆ ಅತಿ ಶೀಘ್ರವಾಗಿ ಆಯುಕ್ತರ ಗಮನಕ್ಕೆ ತರುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಅವರ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಎಲ್ಲಾ ಸರಕಾರಿ ಆಸ್ಪತ್ರೆಗಳಿಂದ ಉಚಿತವಾಗಿ ಮೆಡಿಕಲ್ ಕಿಟ್ ಸೆಲ್ಫ್ ಕೇರ್ ಕಿಟ್ ನೀಡುವಂತೆ ಸಂಸ್ಥೆಯ ವತಿಯಿಂದ ಮನವಿ ಸಲ್ಲಿಸಲಾಯಿತು.ಡಾ.ಉದಯಶಂಕರ್ ಎಚ್.ಜಿ ಆರ್ಥೋಪೆಡಿಕ್ ಸರ್ಜನ್, ಪ್ರಶಮನೀ ಆಸ್ಪತ್ರೆ, ಕೊಪ್ಪ ಇವರು ಮಾಡಿದಂತಹ ಸೇವಾ ಕಾರ್ಯಗಳನ್ನು ಗುರುತಿಸಿ, ಸೇವಾಭಾರತಿ ಸಂಸ್ಥೆಯ ವತಿಯಿಂದ “ಸೇವಾ ಶ್ರೇಷ್ಠ -2024” ಗೌರವವನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಸ್ವರ್ಣ ಗೌರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಕ್ಲಬ್ ಝೋನ್ – 4 ಅಸಿಸ್ಟೆಂಟ್ ಗವರ್ನರ್ ರೊ| ಜಗನ್ನಾಥ್ ಕೋಟೆ, ಉಡುಪಿಯ ಭಾರತ್ ವಿಕಾಸ್ ಪರಿಷತ್ ಭಾರ್ಗವ ಶಾಖೆ ಸಂಚಾಲಕ ವಸಂತ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ನ್ಯೂರೋಲಜಿಸ್ಟ್ ಸಮಾಲೋಚನೆ, ಆರ್ಥೋಪೆಡಿಕ್ ವೈದ್ಯರ ಸಮಾಲೋಚನೆ, ಕಣ್ಣಿನ ತಪಾಸಣೆ, ಹಲ್ಲಿನ ತಪಾಸಣೆ, ಅಪ್ಡಮಿನಲ್ ಸ್ಕ್ಯಾನಿಂಗ್, ಜನರಲ್ ವೈದ್ಯ (physician) ರಿಂದ ಸಮಾಲೋಚನೆ, ಫಿಜಿಯೋಥೆರಪಿಸ್ಟ್ ನಿಂದ ಅಸಿಸ್ಟೆಂಟ್ ಮತ್ತು ಫಿಸಿಯೋಥೆರಪಿಗಳ ಬಗ್ಗೆ ತರಬೇತಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗಾಲಿಕುರ್ಚಿಯನ್ನು ಸುರೇಶ್ ಕೋಟೆ, ಉಡುಪಿ ಇವರಿಗೆ ಉಡುಪಿ ಜಿಲ್ಲೆಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಶ್ರೀಮತಿ ರತ್ನ ಸುವರ್ಣ ಹಸ್ತಾಂತರಿಸಿದರು. ಒಟ್ಟು 15 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ನಗರಸಭಾ ಸದಸ್ಯರು ಮತ್ತು ದಿವ್ಯಾಂಗರ ರಕ್ಷಣಾ ಸಮಿತಿ ಸಂಚಾಲಕ ವಿಜಯ ಕೊಡವೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕ ಕೆ ವಿನಾಯಕ ರಾವ್ ಸ್ವಾಗತಿಸಿ, ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮನ ಹಾಗೂ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ ಕಾರ್ಯಕ್ರಮವನ್ನು ನಿರೂಪಿಸಿ, ಕಂಪ್ಲೇಂಟ್ ಮತ್ತು ಫೈನಾನ್ಸ್ ಮ್ಯಾನೇಜರ್ ಮೋಹನ್ ಎಸ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here