ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಯೋಧರು-ಪೋಲಿಸರಿಗೆ ಗೌರವಾರ್ಪಣೆ ‘ರಕ್ಷಕ ನಮನ’

0

ಗುರುವಾಯನಕೆರೆ: “ಯೋಧರು ಹಾಗೂ ಆರಕ್ಷಕರ ರಕ್ಷಣೆಯಲ್ಲಿ ನಾವೆಲ್ಲ ಸುಭಧ್ರರಾಗಿದ್ದೇವೆ. ಹಾಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಕೂಡ ಯೋಧ ಹಾಗೂ ಆರಕ್ಷಕರಿಗೆ ಚಿರಋಣಿಯಾಗಿರಬೇಕು” ಎಂದು ಬೆಳ್ತಂಗಡಿ ಹೋಲಿ ರಿಡಿಮಾರ್ ಚರ್ಚ್ನ ಪ್ರಧಾನ ಧರ್ಮ ಗುರುಗಳಾದ ಅತಿವಂದನೀಯ ವಾಲ್ಟರ್ ಓಸ್ವಾಲ್ಡ್ ಡಿಮೆಲ್ಲೋ ಹೇಳಿದರು. ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡ ಎಕ್ಸೆಲ್‌ನ ವಿದ್ಯಾರ್ಥಿಗಳ ಪಾಲಕರಾದ ೭೬ ಮಂದಿ ಮಿಲಿಟರಿ ಯೋಧರು ಹಾಗೂ ಕರ್ನಾಟಕ ಪೋಲಿಸ್ ಪಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಹಮ್ಮಿಕೊಂಡ ಗೌರವಾರ್ಪಣೆಯ ಕಾರ್ಯಕ್ರಮ, ‘ರಕ್ಷಕ-ನಮನ’ ಸಮಾರಂಭವನ್ನು ಉಧ್ಘಾಟಿಸಿ ಅವರು ಮಾತನಾಡಿದರು. “ಯೋಧರು ದೇಶದ ಗಡಿಗಳಲ್ಲಿ ರಕ್ಷಣೆ ನೀಡಿದರೆ, ಪೋಲಿಸರು ದೇಶದೊಳಗೆ ಶಾಂತಿ ಸುವ್ಯವಸ್ಥೆ ಕಾಪಾಡಿ ನಾಗರಿಕರಿಗೆ ನೆರವಾಗುತ್ತಿದ್ದಾರೆ.” ಎಂದವರು ಬಣ್ಣಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿಯವರು ಮಾತನಾಡಿ “ಎಕ್ಸೆಲ್‌ನ ಪಾಲಕರಾದ ಮಿಲಿಟರಿ ಯೋಧ ಹಾಗೂ ಪೋಲಿಸರಿಗೆ ಗೌರವಾರ್ಪಣೆ ಮಾಡುವ ಮೂಲಕ ಎಕ್ಸೆಲ್ ಕಾಲೇಜು ಬಳಗ ಸಾಂಕೇತಿಕವಾಗಿ ಭಾರತೀಯ ಸೇನೆ ಹಾಗೂ ಕರ್ನಾಟಕ ಪೋಲಿಸ್ ಪಡೆಗಳನ್ನು ಗೌರವಿಸಿದಂತಾಗಿದೆ”ಎಂದರು.

ಇನ್ನೋರ್ವ ಮುಖ್ಯ ಅತಿಥಿ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ಅವರು ಮಾತನಾಡಿ “ಭಾರತದ ಮಣ್ಣೇ ಪವಿತ್ರವಾದುದು. ವಿದೇಶ ಪ್ರವಾಸ ಮಾಡಿ ಬಂದ ಸ್ವಾಮಿ ವಿವೇಕಾನಂದರು ಭಾರತದ ಮಣ್ಣನ್ನು ಮೈ ಮೇಲೆ ಸುರಿದುಕೊಂಡರಂತೆ, ಪೋಪ್ ಜಾನ್ ಪಾಲ್ ಅವರು ಬಾರತದ ಮಣ್ಣಿಗೆ ಮೊದಲ ಬಾರಿ ಸ್ಪರ್ಶಿಸಿದಾಗ ತಲೆಬಾಗಿ, ಮಣ್ಣನ್ನು ಚುಂಬಿಸಿದರಂತೆ. ಇಂಥ ಹತ್ತಾರು ಉದಾಹರಣೆಗಳು ಭಾರತದ ಮಣ್ಣಿನ ಪಾವಿತ್ರ್ಯವನ್ನು ಮನವರಿಕೆ ಮಾಡುತ್ತದೆ.ಅಂಥ ಪಾವಿತ್ರ್ಯವನ್ನು ಉಳಿಸುವ ಜವಾಬ್ದಾರಿ ಮುಂದಿನ ತಲೆಮಾರಿನ ಮೇಲಿದೆ” ಎಂದರು.

ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದ ಭಾರತೀಯ ವಾಯುಸೇನೆಯ ವಿಶ್ರಾಂತ ಅಭಿಯಂತರರಾದ ಅನಂತ್ರಾಜ್ ಜೈನ್ ಅವರು ತಮ್ಮ ಸೇವಾವಧಿಯ ಅನುಭವವನ್ನು ಹಂಚಿಕೊಂಡರು.
ಕಾಲೇಜು ಅಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಅಭಿರಾಮ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು, ಉಪನ್ಯಾಸಕರಾದ ಜಯರಾಮ್ ಮತ್ತು ವಿಕಾಸ್ ಹೆಬ್ಬಾರ್ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ ಜೈನ್ ನಿರೂಪಿಸಿದರು.ಆಡಳಿತಾಧಿಕಾರಿ ಪುರುಷೋತ್ತಮ್ ಸಹಕರಿಸಿದರು.ವಿಕಾಸ್ ಹೆಬ್ಬಾರ್ ವಂದಿಸಿದರು. ಸಭಾಕಾರ್ಯಕ್ರಮದ ಪೂರ್ವದಲ್ಲಿ ರಾಷ್ಟ ಪ್ರಶಸ್ತಿ ಜ್ಞಾನ ಐತಾಳ್ ತಂಡದವರಿಂದ ‘ನೃತ್ಯ-ಗಾನ-ಝೇಂಕಾರ’ ಎನ್ನುವ ವಿನೂತನ ಕಾರ್ಯಕ್ರಮ ನಡೆಯಿತು.ಬೆಳಿಗ್ಗೆ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ಧ್ವಜಾರೋಹಣವಾಗಿ ‘ನಮ್ಮ ನಡಿಗೆ ಅರಿವಿನಕಡೆಗೆ’ ಧ್ಯೇಯದಡಿ ವೈಭವದ ಪಥಸಂಚಲನ ಬೆಳ್ತಂಗಡಿಯವರೆಗೆ ಸಾಗಿತ್ತು.

LEAVE A REPLY

Please enter your comment!
Please enter your name here