Site icon Suddi Belthangady

ನಾವು ನಂಬಿದಷ್ಟು ದೈವ ಶಕ್ತಿ ನೀಡಿ ರಕ್ಷಿಸುತ್ತದೆ: ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ

ಉಜಿರೆ: ದೇವರ ಮುಂದೆ ನಾವೆಲ್ಲ ಅತಿ ಸಣ್ಣವರು. ವ್ಯಕ್ತಿಗಳು ಸ್ತುತಿಸುತ್ತಾರೆ,ನಿಂದಿಸತ್ತಾರೆ. ಈ ಮಣ್ಣಿನಲ್ಲಿ ಬದಲಾಗುವ ಬೆಳಕು ಹರಿಯುತ್ತದೆ. ಕುಣಿತ ಭಜನೆಯಿಂದ ದೈವಿಕ ಶಕ್ತಿ ಹೆಚ್ಚುತ್ತದೆ. ನಮ್ಮ ಭಕ್ತಿಯ ಬೇಡಿಕೆಗೆ ದೇವಿ ಹೂಪ್ರಸಾದ ನೀಡಿ ಅನುಗ್ರಹಿಸುತ್ತಾಳೆ.

ನಾವು ನಂಬಿದಷ್ಟು ಪ್ರೀತಿಯಿಂದ ಪ್ರಸಾದ ಕೊಡುತ್ತಾಳೆ. ಎಲ್ಲ ಭಾವ,ಭಾವನೆಗಳಿಗೆ ಶಕ್ತಿ ನೀಡುವ ದೈವ ,ನಂಬಿದಷ್ಟು ರಕ್ಷಿಸುತ್ತದೆ ಎಂದು ವಾರಣಾಸಿ ಕಾಶಿ ಮಠದ ಪರಮಹಂಸ ಪರಿವ್ರಾಜಕ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಡಿ 14 ರಂದು ಮುಂಡೂರು ಮಂಗಳಗಿರಿ ಶ್ರೀ ಕ್ಷೇತ್ರದ ವಠಾರದಲ್ಲಿ ಶ್ರೀ ನಾಗಾಂಬಿಕಾ ದೇವಸ್ಥಾನ, ಶ್ರೀ ನಾಗಕಲ್ಲುರ್ಟಿ ದೈವಸ್ಥಾನ, ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಮತ್ತು ಗುರುವಾಯನಕೆರೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಭಜಕರಿಂದ 48 ದಿನಗಳ ಕಾಲ ನಡೆದ ಭಜನಾ ಕಾರ್ಯಕ್ರಮದ ಸಮಾರೋಪ “ಮಂಗಳಗಿರಿ ಭಜನೋತ್ಸವ ” ವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಎಳೆಯರಿಂದ ವೃದ್ಧರವರೆಗೂ ವಿಶೇಷ ಶ್ರದ್ಧಾಭಕ್ತಿಯಿಂದ ಕುಣಿತ ಭಜನೆ ಯಲ್ಲಿ ಪಾಲ್ಗೊಳ್ಳುತ್ತಿರುವುದು ಅಮ್ಮನ ಅನುಗ್ರಹ. ತಂದೆ ತಾಯಿಗಳನ್ನು ಗೌರವಿಸದಿದ್ದರೆ ಯಾವ ದೇವಸ್ಥಾನಕ್ಕೆ ಹೋದರೂ ವ್ಯರ್ಥ. ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ಇನ್ನಷ್ಟು ಹೆಚ್ಚಬೇಕು ಎಂದು ನುಡಿದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ಕಿರಣಚಂದ್ರ ಪುಷ್ಪಗಿರಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ರಾಜೀವ, ,ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಂದ ಸಾಲ್ಯಾನ್ , ಗುರುವಾಯನಕೆರೆ ಭಜನಾ ಪರಿಷತ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ, ಧ.ಗ್ರಾ.ಯೋಜನೆಯ ದಿನೇಶ್, ಯೋಜನಾಧಿಕಾರಿ ಯಶೋಧರ, ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ, ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್, ತಾಲೂಕು ಸಹಕಾರಿ ಸಂಘದ ಯಾದವ ಕುಲಾಲ್, ಪ್ರಧಾನ ಅರ್ಚಕ ಅರವಿಂದ ಭಟ್, ಮೇಲಂತಬೆಟ್ಟು ಗ್ರ್ರಾ.ಪಂ.ಅಧ್ಯಕ್ಷೆ ಸವಿತಾ,ಶ್ರೀ ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ ಅಂಚನ್ , ಭಜಕರ ಸಂಘದ ಕಾರ್ಯದರ್ಶಿ ಕೇಶವ ಕುಲಾಲ್ ,ದೇವಸ್ಥಾನದ ಕಾರ್ಯದರ್ಶಿ ಜಯರಾಜ್ ,ಕಲ್ಪನಾ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

ಯೋಜನೆಯ ಕೃಷಿ ಅಧಿಕಾರಿ ರಾಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version