ಬೆಳ್ತಂಗಡಿ: ತಾಲೂಕು ಘಟಕ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಗೌರವ ಸಲಹೆಗಾರರು, ಮಹಾ ಪೊಷಕರು, ಸದಾ ತನ್ನ ಸಮುದಾಯದ ಏಳಿಗೆಗೆ ಅವಿರತ ಶ್ರಮಿಸಿದ ಹಾಗೂ ದಲಿತ ಚಳುವಳಿಯ ಮುಂಚೂಣಿಯಲ್ಲಿದ್ದ ಅಮ್ಮು ಕುಮಾರ್ ಅಳದಂಗಡಿ ಅವರು ಡಿ.8ರಂದು ನಿಧನರಾಗಿರುತ್ತಾರೆ. ಮೃತರ ಗೌರವಾರ್ಥ ಬೆಳ್ತಂಗಡಿಯ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಿ.14ರಂದು ತಾಲೂಕು ಘಟಕದಿಂದ ನುಡಿನಮನ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶೀನ ಮಾಸ್ತಿಕಟ್ಟೆ ಅವರು ದಿ| ಅಮ್ಮು ಕುಮಾರ್ ಅವರು ದೀಪ ಬೆಳಗಿ, ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂಘಟನೆಗೆ ಮತ್ತು ಸಮುದಾಯಕ್ಕೆ ಅವರು ನೀಡಿದ ಕೊಡುಗೆಗಳನ್ನು ವಿವರಿಸುವುದರ ಮೂಲಕ ನುಡಿನಮನ ಸಲ್ಲಿಸಿದರು.
ಆದಿದ್ರಾವಿಡ ಸಮುದಾಯದ ಮತ್ತು ಸಂಘಟನೆಯ ಪ್ರಮುಖರಾದ ವೆಂಕಪ್ಪ ಪಿ.ಎಸ್., ಯಮುನ ನಾರಾವಿ, ಗೋಪಾಲಕೃಷ್ಣ ಕುಕ್ಕಳ, ರಾಘವ ಕಲ್ಮಂಜ, ದಿನೇಶ್ ಕೆ. ಕೊಕ್ಕಡ, ಶೇಖರ್ ವಿ. ಧರ್ಮಸ್ಥಳ, ಶರತ್ ಕೊಕ್ಕಡ ಅವರು ದಿ| ಅಮ್ಮುಕುಮಾರ್ ಅವರ ಬಾಲ್ಯದ ಕಷ್ಟಕರ ಜೀವನ, ಕಲಿಕೆ ಮತ್ತು ಉದ್ಯೋಗವನ್ನು ಪಡೆದುಕೊಳ್ಳುವಲ್ಲಿನ ಆಸಕ್ತಿ, ವ್ಯಕ್ತಿತ್ವ, ಅವರ ಸಂತೃಪ್ತ ಸಾಂಸಾರಿಕ ಜೀವನ, ಹಾಗೂ ಸಾಮಾಜಿಕವಾಗಿ, ಸಂಘಟನಾತ್ಮಕವಾಗಿ ಸಮುದಾಯಕ್ಕೆ ಓರ್ವ ವ್ಯಕಿಯಾಗಿ ಮತ್ತು ಶಕ್ತಿಯಾಗಿ ನೀಡಿದ ಕೊಡುಗೆಗಳನ್ನು ಮನನ ಮಾಡಿಕೊಳ್ಳುವುದರ ಮೂಲಕ ಅವರಿಗೆ ನುಡಿನಮನ ಸಲ್ಲಿಸಲಾಯಿತು. ತಾಲೂಕು ಮತ್ತು ಗ್ರಾಮ ಸಮಿತಿಯ ಪದಾಧಿಕಾರಿಗಳು, ಆದಿದ್ರಾವಿಡ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶೇಖರ್ ವಿ. ಧರ್ಮಸ್ಥಳ ಅವರು ಎಲ್ಲರನ್ನು ಸ್ವಾಗತಿಸಿ, ಧನ್ಯವಾದ ನೀಡಿದರು.

