Site icon Suddi Belthangady

ನೋಟಿಸ್‌ನಲ್ಲಿ ಆಪ್ತ ಕಾರ್ಯದರ್ಶಿ ಹೆಸರಿನ ಸಂದೇಶ ಉಲ್ಲೇಖ: ಸಹಕಾರ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದ ದಿನೇಶ್ ಗುಂಡೂರಾವ್

ಬೆಳ್ತಂಗಡಿ: ತನ್ನ ಆಪ್ತ ಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಅವರ ಹೆಸರನ್ನು ಉಲ್ಲೇಖಿಸಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಸಂಬಂಧಿಸಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಪತ್ರದ ವಿವರ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು ನನ್ನ ಆಪ್ತಕಾರ್ಯದರ್ಶಿಯಾದ ಕೆ.ಎ ಹಿದಾಯತ್ತುಲ್ಲ ಇವರ ದಿನಾಂಕ:25.11.2025 ರ ಮನವಿಯಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಉಪವಿಭಾಗ ಪುತ್ತೂರು ಇವರು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬುದರ ಕುರಿತ ದೂರಿನ ವಿಷಯದಲ್ಲಿ ಅಧ್ಯಕ್ಷರು/ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಬೆಳ್ತಂಗಡಿ ತಾಲ್ಲೂಕು ಇವರಿಗೆ ನೀಡಲಾಗಿರುವ ದಿನಾಂಕ:30.10.2025ರ ನೋಟೀಸ್‌ನ ಉಲ್ಲೇಖದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿಗಳ ಮೊಬೈಲ್ ಸಂದೇಶ ದಿನಾಂಕ:24.07.2025ಎಂದು ದಾಖಲಿಸಿದ್ದು ಇವರು ಸದರಿ ಅಧಿಕಾರಿಗೆ ಯಾವುದೇ ಸಂದೇಶವನ್ನು ನೀಡಿರುವುದಿಲ್ಲವಾದ್ದರಿಂದ ತಪ್ಪು ಮಾಹಿತಿಯನ್ನು ಉಲ್ಲೇಖಿಸಿ ಅರೆನ್ಯಾಯಿಕ ನೋಟೀಸ್ ನೀಡಿರುವುದು ಸರ್ಕಾರಿ ನೌಕರರಿಗೆ ತಕ್ಕುದಲ್ಲದ ಕ್ರಮವಾಗಿದೆ. ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲು ಹಾಗೂ ಸಹಕಾರಿ ವ್ಯವಸಾಯಿಕ ಸಂಘದ ಅವ್ಯವಹಾರಗಳ ಬಗ್ಗೆ ನಿಯಮಾನುಸಾರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಕೋರಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮನವಿ ಸಲ್ಲಿಸಿದ್ದ ಹಿದಾಯತ್ತುಲ್ಲ: ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಉಪವಿಭಾಗ ಪುತ್ತೂರು ಇವರು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬುದರ ಕುರಿತ ದೂರಿನ ವಿಷಯದಲ್ಲಿ ಅಧ್ಯಕ್ಷರು/ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘ ಬೆಳ್ತಂಗಡಿ ತಾಲ್ಲೂಕು ಇವರಿಗೆ ನೀಡಲಾಗಿರುವ ದಿನಾಂಕ:30.10.2025ರ ನೋಟೀಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿಗಳ ಮೊಬೈಲ್ ಸಂದೇಶ ದಿನಾಂಕ:24.07.2025ಎಂದು ದಾಖಲಿಸಿದ್ದು ನಾನು ಸದರಿ ಅಧಿಕಾರಿಗೆ ಯಾವುದೇ ಸಂದೇಶವನ್ನು ನೀಡಿರುವುದಿಲ್ಲ. ಆದ್ದರಿಂದ ತಪ್ಪು ಮಾಹಿತಿಯನ್ನು ಉಲ್ಲೇಖಿಸಿ ಅರೆನ್ಯಾಯಿಕ ನೋಟೀಸ್ ನೀಡಿರುವುದು ಕಂಡುಬಂದಿದೆ. ಇದು ಸರ್ಕಾರಿ ನೌಕರರಿಗೆ ತಕ್ಕುದಲ್ಲದ ಕ್ರಮವಾಗಿದ್ದು ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮಗಳ ವಿರುದ್ಧವಾಗಿದೆ. ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲು ಕೋರುತ್ತೇನೆ ಎಂದು ಕೆ.ಎ. ಹಿದಾಯತ್ತುಲ್ಲ ಅವರು ಸಚಿವರಿಗೆ ಮನವಿ ಸಲ್ಲಿಸಿದ್ದರು.

Exit mobile version