ಉಜಿರೆ: ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಮಂಗಳೂರಿನ ಶಕ್ತಿ ನಗರದಲ್ಲಿರುವ ದಕ್ಷಿಣ ಕನ್ನಡ ಫಿಲೇಟೆಲಿ ಮತ್ತು ನ್ಯೂಮಿಸ್ಮ್ಯಾಟಿಕ್ ಅಸೋಸಿಯೇಷನ್ (DKPANA)ಇವರು ಜಂಟಿಯಾಗಿ ನ.15ರಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ನಯನ ಮನೋಹರವಾಗಿತ್ತು. ಈ ವಸ್ತು ಪ್ರದರ್ಶನದಲ್ಲಿ, ಹಳೇ ನಾಣ್ಯಗಳು, ಸ್ಟಾಂಪುಗಳು, ಅನೇಕ ಪುರಾತನ ವಸ್ತುಗಳು, ಅವುಗಳ ಜತೆಗೆ ರಾಜರ್ಷಿ ವೀರೇಂದ್ರ ಹೆಗ್ಗಡೆಯವರ ಸಂಗ್ರಹದ ಕೆಲವು ವಸ್ತುಗಳ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ಅತೀ ಉಪಯುಕ್ತ ಮಾಹಿತಿ ನೀಡಿದ ಈ ವಸ್ತು ಪ್ರದರ್ಶನ, ಆ ದಿನ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯ ವರೆಗೆ ನಡೆಯಿತು.
ಶ್ರೀ ಧ.ಮಂ. ಎಜುಕೇಷನಲ್ ಸೊಸೈಟಿಯ ಐಟಿ ವಿಭಾಗದ ಸಿ.ಇ.ಓ ಆಗಿರುವ ಪೂರಣ್ ವರ್ಮ ಅವರು ವಸ್ತು ಪ್ರದರ್ಶನದ ಉದ್ಘಾಟನೆ ಮಾಡಿದರು. ಪುರಾತನ ವಸ್ತುಗಳ ಸಂಗ್ರಹದಲ್ಲಿ ವೀರೆಂದ್ರ ಹೆಗ್ಗಡೆಯವರ ಆಸಕ್ತಿಯನ್ನು ವಿವರಿಸಿ, ಭಾಗವಹಿಸಿದ ಎಲ್ಲಾ ತಂಡದವರನ್ನು ಅಭಿನಂದಿಸಿದರು. ಶ್ರೀ ಧ.ಮಂ. ಕಾಲೇಜಿನ ಪ್ರಾಚಾರ್ಯ ಡಾ. ವಿಶ್ವನಾಥ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. DKPANA ಅಧ್ಯಕ್ಷ ಮರ್ಕಡ್ ಪ್ರಭಾಕರ ಕಾಮತ್, ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು, ಧರ್ಮಸ್ಥಳ ವಸ್ತು ಸಂಗ್ರಹಾಲಯದ ಡೈರೆಕ್ಟರ್ ಶ್ರೀ ರಿತೇಶ್ ಮುಖ್ಯ ಅತಿಥಿಗಳಾಗಿದ್ದರು. ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಪ್ರತಿ ಸದಸ್ಯರಿಗೂ ಶ್ರೀ ವೀರೇಂದ್ರ ಹೆಗ್ಗಡೆಯವರು ಸ್ವತಃ ಹಸ್ತಾಕ್ಷರ ಮಾಡಿದ ಸರ್ಟಿಫಿಕೇಟ್ ಗಳನ್ನು ನೀಡಲಾಯಿತು. ವಸ್ತು ಪ್ರದರ್ಶನ ಪ್ರಯೋಜನ ಪಡೆದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ಸಂಚಾಲಕಿ ಡಾ. ವಿದ್ಯಾ ಶ್ರೀಹರಿ ಅವರು ಅಭಿನಂದಿಸಿದರು.

