ಉಜಿರೆ: ಮಕ್ಕಳ ದಿನಾಚರಣೆಯ ಅಂಗವಾಗಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.14ರಂದು ಭಾವಪೂರ್ಣ ಹಾಗೂ ಮನರಂಜನಾಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತು. ಶಾಲೆಯ ಸಂಚಾಲಕ ಫಾ. ಅಬೆಲ್ ಲೋಬೊ, ಪ್ರಾಂಶುಪಾಲ ಫಾ. ವಿಜಯ್ ಲೋಬೋ, ಮುಖ್ಯ ಅತಿಥಿಗಳಾಗಿ ಪ್ರಭಾತ ಸ್ಟೋರ್ ಮಾಲಕ ಪ್ರವೀಣ್ ಭಟ್, ಶಾಲಾ ನಾಯಕಿಯರಾದ ಸಿಂಚನ ಮತ್ತು ಮಿಷೆಲ್ ಪಿಂಟೊ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳು ಮಾತನಾಡಿ ‘ಮಕ್ಕಳು ನಮ್ಮ ರಾಷ್ಟ್ರದ ಭವಿಷ್ಯ. ಅವರಲ್ಲಿ ಸೃಜನಶೀಲತೆ, ಮೌಲ್ಯಗಳು ಹಾಗೂ ಆತ್ಮವಿಶ್ವಾಸ ಬೆಳೆಸುವುದು ಶಾಲೆಯ ಹೊಣೆಗಾರಿಕೆ’ ಎಂದು ಹೇಳಿದರು. ಶಾಲಾ ಸಂಚಾಲಕ ಮಕ್ಕಳ ದಿನಾಚರಣೆಯ ಶುಭ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಿಂದ ಮಕ್ಕಳಿಗೆ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಾಗಿದ್ದು, ಇದು ಮಕ್ಕಳಲ್ಲಿ ಹೆಚ್ಚಿನ ಉತ್ಸಾಹವನ್ನು ಮೂಡಿಸಿತು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದರು. ಸಹಶಿಕ್ಷಕಿ ಕೀರ್ತಿಕ ಅವರು ಸ್ವಾಗತಿಸಿ, ಸಹ ಶಿಕ್ಷಕಿ ನಿಶಾ ನಿರೂಪಿಸಿ, ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು. ಸಹ ಶಿಕ್ಷಕಿ ರಕ್ಷಾ ಅವರು ಧನ್ಯವಾದವನ್ನು ನೀಡಿದರು.

