


ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೆಂಗಳೂರು ಹಾಗೂ ಸಾಹಿತ್ಯ ಸೌರಭ ಫೌಂಡೇಶನ್ ಒಡಗೋಲ ಇವರ ಸಹಯೋಗದಲ್ಲಿ ಕೊಡಮಾಡುವ ರಾಜ್ಯ ಮಟ್ಟದ “ಕಾವ್ಯ ಕೇಸರಿ” ಪ್ರಶಸ್ತಿಗೆ ಶಿಕ್ಷಕಿ ಹಾಗೂ ಕವಯಿತ್ರಿ ಪದ್ಮಶ್ರೀ ಎಸ್.ಜೈನ್ ಭಾಜನರಾಗಿದ್ದಾರೆ.


ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ “ಕನ್ನಡದ ತೇರು ಎಳೆಯೋಣ ಬಾರ” ಅಭಿಯಾನದ ರಾಜ್ಯಮಟ್ಟದ ಕಾವ್ಯಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪದ್ಮಶ್ರೀ ಎಸ್.ಜೈನ್ ಅವರನ್ನು ಗೌರವಿಸಿ ಈ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. ಇವರು ಪ್ರಸಕ್ತ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಹ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಿ.ಎಸ್ಸಿ, ಬಿ.ಎಡ್ ಹಾಗೂ ಗಣಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಪತ್ರಕರ್ತ ಸಂದೇಶ ಎಸ್.ಜೈನ್ ಅವರ ಧರ್ಮಪತ್ನಿಯಾಗಿದ್ದಾರೆ. ತಾಲೂಕಿನ ಕನ್ಯಾಡಿ-1 ಗ್ರಾಮದ ಮೇಗಿನ ಸುರೆಕ್ಯಗುತ್ತು ಮನೆಯ ನಿವಾಸಿಯಾಗಿರುವ ಅವರು ಹಾಲಿ ದಾಂಡೇಲಿಯಲ್ಲಿ ವಾಸವಾಗಿದ್ದಾರೆ. 130ಕ್ಕೂ ಹೆಚ್ಚು ಕವನಗಳನ್ನು ಬರೆದಿರುವ ಪದ್ಮಶ್ರೀ ಎಸ್. ಜೈನ್ ಅವರಿಗೆ ಈಗಾಗಲೇ 15ಕ್ಕೂ ಹೆಚ್ಚು ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಗಾಯಕಿಯಾಗಿಯೂ ಗಮನ ಸೆಳೆದಿರುವುದರ ಜೊತೆಗೆ ಕ್ರೀಡೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನವನ್ನು ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.









