ಧರ್ಮಸ್ಥಳ: ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಯಿಂದ ಭೇಟಿ ಮಾಡಿ ರಬ್ಬರ್ ಕೃಷಿಕರ ಸಮಸ್ಯೆ ಗಂಭೀರ ವಿಷಯವಾಗಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯಲು ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಹಿಂದಿನ ಸರಕಾರಗಳು ರಬ್ಬರು ಕೃಷಿಗೆ ನೀಡಿದ ಪ್ರೋತ್ಸಾಹದಿಂದ ನಮ್ಮ ರಾಜ್ಯದಲ್ಲಿಯೂ ಕೃಷಿಕ ಬೆಳೆಗಾರರು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಯಾಗಿ ರಬ್ಬರು ಕೃಷಿಯಲ್ಲಿ ತೊಡಗಿಕೊಂಡಿರುತ್ತಾರೆ. ಇದೀಗ ರಬ್ಬರು ಆದಾಯ ಕೃಷಿ ಖರ್ಚು-ವೆಚ್ಚ ಸರಿದೂಗಿಸದೇ ಇದ್ದು ಅವಲಂಬಿತ ಕೃಷಿಕರು ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ವಿವರಿಸಲಾಯಿತು. ಅಂತೆಯೇ ರಬ್ಬರು ಆಮದು ಸುಂಕವನ್ನು ಹೆಚ್ಚಿಸಿ ದೇಶೀಯ ರಬ್ಬರು ಉತ್ಪಾದನೆಗೆ ಹೆಚ್ಚಿನ ಬೇಡಿಕೆ ಬರುವಂತೆ ಮತ್ತು ರಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ನಿಗಧಿ ಪಡಿಸುವಂತೆ ಸರಕಾರವನ್ನು ಬೆಳೆಗಾರರ ಪರವಾಗಿ ಒತ್ತಾಯಿಸಲು ವಿನಂತಿಸಲಾಯಿತು.
ವೇದಿಕೆಯ ಸಲಹೆಗಾರ ಹಿರಿಯ ಅರ್ಥಿಕತಜ್ಞ ಡಾ. ವಿಘ್ನೇಶ್ವರ ವರ್ಮುಡಿ, ಅಧ್ಯಕ್ಷ ಶ್ರೀಧರ ಜಿ. ಭಿಡೆ, ಸಂಯೋಜಕ ಅನಂತ ಭಟ್ ಎಂ., ಕಾರ್ಯದರ್ಶಿ ರಾಜು ಶೆಟ್ಟಿ, ಬೆಳ್ತಂಗಡಿ ರಬ್ಬರ್ ಸೊಸೈಟಿ ನಿರ್ದೇಶಕ ಶಾಜಿ ಪಿ.ಎ. ಉಪಸ್ಥಿತರಿದ್ದರು.

