ಬೆಳ್ತಂಗಡಿ: ಟೆಂಪಲ್ ಆಫ್ ಮಾರ್ಷಲ್ ಆರ್ಟ್ಸ್ ® ಮತ್ತು ಒಕಿನಾವನ್ ಶೋಟೋಕನ್ ಕರಾಟೆ-ಡೋ ಇಂಟರ್ನ್ಯಾಷನಲ್ ಅವರ ಆಶ್ರಯದಲ್ಲಿ ನಡೆದ 4ನೇ ದಕ್ಷಿಣ ಭಾರತ ಓಪನ್ ಕರಾಟೆ ಚಾಂಪಿಯನ್ಶಿಪ್ – 2025 ಸ್ಪರ್ಧೆ, ನ.9ರಂದು ಜೆ.ಪಿ.ನಗರದ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಜೆ. ಪಿ ನಗರ, ಬೆಂಗಳೂರು ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಸ್ಪರ್ಧೆಯಲ್ಲಿ ಜೆ.ಪಿ.ನಗರದ ಯಲೆಚೆನಹಳ್ಳಿಯ ಸನ್ ಜ್ಯುಪಿಟರ್ ಇಂಟರ್ನ್ಯಾಷನಲ್ ಶಾಲೆಯ 3ನೇ ತರಗತಿ ವಿದ್ಯಾರ್ಥಿಗಳು ಎ. ವಿಭಾಷ್ ವಿನಯಚಂದ್ರ ಮತ್ತು ಎ. ವಿಭಾ ವಿನಯಚಂದ್ರ (ಹಳದಿ ಬೆಲ್ಟ್, ಕಿರಿಯ ವಿಭಾಗ) ಅವರು ಭಾಗವಹಿಸಿ, ತಲಾ ಎರಡು ಟ್ರೋಫಿಗಳನ್ನು ಗೆದ್ದು ತಮ್ಮ ಅಪಾರ ಪ್ರತಿಭೆ ಮತ್ತು ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಿದರು.
ಮಿತ್ತಬಾಗಿಲು ಗ್ರಾಮದ ಆಚಾರಿಬೆಟ್ಟು ಮನೆಯ ಈ ಅವಳಿ ಮಕ್ಕಳು ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇವರ ಪೋಷಕರು ವಿನಯಚಂದ್ರ (ವಕೀಲರು, ಕರ್ನಾಟಕ ಹೈಕೋರ್ಟ್) ಮತ್ತು ಅಮಿತಾ. ಈ ಇಬ್ಬರ ಅದ್ಭುತ ಪ್ರದರ್ಶನವು ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಇವರ ತರಬೇತಿದಾರರಾದ ರಾಜೇಂದ್ರ ಬಾಬು ಮತ್ತು ಗೀತಾ ಅವರು ಮಾರ್ಗದರ್ಶನ ನೀಡುತ್ತಿದ್ದು, ಅವರ ತಪಸ್ಸು ಮತ್ತು ನಿಷ್ಠೆ ಈ ಸಾಧನೆಯ ಹಿಂದಿನ ಪ್ರಮುಖ ಶಕ್ತಿಯಾಗಿದೆ.
ವಿಭಾಷ್ ಮತ್ತು ವಿಭಾ ಅವರ ಭವಿಷ್ಯದ ಕ್ರೀಡಾ ಬದುಕು ಯಶಸ್ಸು, ಶ್ರೇಯಸ್ಸು ಹಾಗೂ ಕೀರ್ತಿಯಿಂದ ಬೆಳಗಲೆಂದು ಪೋಷಕರು, ಆಚಾರಿಬೆಟ್ಟು ಕುಟುಂಬದವರು, ತರಬೇತಿದಾರರು, ಶಾಲಾ ಆಡಳಿತ ಮತ್ತು ಗುರುವೃಂದ ಹಾರೈಸಿದ್ದಾರೆ.

