ಬೆಳ್ತಂಗಡಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗೆ ಅಗತ್ಯ ಇಲ್ಲದ ಯೋಜನೆಗಳನ್ನು ಜಾರಿ ಮಾಡಿ ಕಾರ್ಮಿಕರ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ಅನಗತ್ಯವಾಗಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಹಾಗೂ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿರುವ ಬಗ್ಗೆ ಬಿಎಂಎಸ್ ಸಂಘಟನೆಯು ಹಾಗೂ ರಾಜ್ಯದ ಹಲವಾರು ಸ್ವತಂತ್ರ ಸಂಘಟನೆಯವರು ರಾಜ್ಯದ ವಿವಿದೆಡೆ ಪ್ರತಿಭಟನೆಯನ್ನು ನಡೆಸಿದ್ದರು.
ಇದರ ಪರಿಣಾಮವಾಗಿ ಎಚ್ಚೆತ್ತ ಕಾರ್ಮಿಕ ಸಚಿವರು ಮತ್ತು ಮಂಡಳಿ ಇತ್ತೀಚಿಗೆ ನಡೆದ ಮಂಡಳಿಯ ಸಭೆಯಲ್ಲಿ ಕಡಿತಗೊಳಿಸಲಾಗಿದ್ದ ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿವೇತನವನ್ನು ಈ ಹಿಂದಿನಂತೆಯೇ ಮತ್ತು ಹೆಚ್ಚುವರಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಿರುವುದು ಸಂಘಟನೆಯ ಹೋರಾಟಕ್ಕೆ ಸಿಕ್ಕಿದ ಫಲವಾಗಿರುತ್ತದೆ. ಹಾಗೂ ಇನ್ನೂ ಅನೇಕ ಸಮಸ್ಯೆಗಳಾದ ಕಾರ್ಮಿಕರ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯಲ್ಲಿರುವ ಅವ್ಯವಸ್ಥೆ ಹಾಗೂ ಮಂಡಳಿಯ ಪೋರ್ಟೆಲ್ಲ್ ತಾಂತ್ರಿಕ ದೋಷ ಹಾಗೂ ಕಾರ್ಮಿಕರ ನೋಂದಣಿ ಮತ್ತು ನವೀಕರಣಕ್ಕೆ ಅಧಿಕಾರಿಗಳು ಕೇಳುತ್ತಿರುವ ದಾಖಲೆಗಳು ಇದರಿಂದಾಗಿ ಕಾರ್ಮಿಕರಿಗೆ ಪರದಾಟಗಳು ಉಂಟಾಗಿವೆ
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡ ಕಾರ್ಮಿಕ ಸಚಿವರು ಶೀಘ್ರವಾಗಿ ಪರಿಹಾರವನ್ನು ಮಾಡಬೇಕು. ಮತ್ತು ಐದು ವರ್ಷಗಳಿಂದ ಕೆಲವೊಂದು ಕಾರ್ಮಿಕರಿಗೆ ಕಲ್ಯಾಣ ಮಂಡಳಿಯ ನಿರ್ಧಾರಗಳಿಂದ ವಿದ್ಯಾರ್ಥಿಗೆ ವೇತನ ಬಾರದೆ ಇದ್ದು ಇದರ ಬಗ್ಗೆ ಸಹ ಸೂಕ್ತ ಕ್ರಮ ವಹಿಸುವಂತೆ ಹಾಗೂ ಕಾರ್ಮಿಕರಿಗೆ ಅಗತ್ಯ ಇಲ್ಲದ ಯೋಜನೆಗಳಾದ ಟ್ರೈನಿಂಗ್ ಕ್ಯಾಬ್ ಗಳು ಹೆಲ್ತ್ ಚೆಕ್ ಅಪ್ ಗಳು ಸಂಚಾರಿ ವಾಹನ ಚಿಕಿತ್ಸೆಗಳು ಟೆಂಡರ್ ಗಳನ್ನು ರದ್ದು ಮಾಡುವಂತೆ ಹಾಗೂ ಕಾರ್ಮಿಕರ ನೋಂದಣಿಗೆ ಮಂಡಳಿಯ ವತಿಯಿಂದ ತರುತ್ತಿರುವ ವಿವಿಧ ಅಡಚಣೆಗಳನ್ನು ನಿವಾರಿಸುವಂತೆ ಬಿಎಂಎಸ್ ತಾಲೂಕು ಸಮಿತಿಯ ಅಧ್ಯಕ್ಷ, ವಕೀಲ ಉದಯ್ ಬಿ.ಕೆ. ಹಾಗೂ ಕಾರ್ಯದರ್ಶಿ ಅನುಜ್ ಜೈ ರಾಜ್ ಸಾಲಿಯಾನ್ ಆಗ್ರಹಿಸಿರುತ್ತಾರೆ

