ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ಚುನಾವಣೆಯ ಕಾವು ಏರಿದೆ. ಚುನಾವಣಾ ಕಣದಲ್ಲಿ ಘಟಾನುಘಟಿಗಳಿದ್ದು ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗುವ ಸಾಧ್ಯತೆಯಿದೆ. ನಾಮಪತ್ರ ಸಲ್ಲಿಸಲು ಕೊನೇಯ ದಿನವಾದ ನ.೫ರಂದು ಹಲವರು ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅಲೋಶಿಯಸ್ ಎಸ್. ಲೋಬೊ ಮತ್ತು ಕೇಶವ ಪಿ. ನಾಮಪತ್ರ ಸಲ್ಲಿಸಿದ್ದು ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹರಿಪ್ರಕಾಶ್ ಪಿ.ಎನ್. ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ. ನಾಮಪತ್ರ ಪರಿಶೀಲನೆಯ ನಂತರ ಅಧಿಕೃತ ಘೋಷಣೆಯಾಗಲಿದೆ. ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಹರ್ಷಿತ್ ಹೆಚ್., ದಿನೇಶ್, ಕೋಶಾಧಿಕಾರಿ ಸ್ಥಾನಕ್ಕೆ ಮುಮ್ತಾಜ್ ಬೇಗಂ ಮತ್ತು ಸುಜಾತ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದ ೧೫ ವರ್ಷಕ್ಕಿಂತ ಮೇಲ್ಪಟ್ಟು ಸದಸ್ಯತ್ವ ಹೊಂದಿದ ಅನುಭವವುಳ್ಳ ಮೂರು ಸ್ಥಾನಗಳಿಗೆ ಶ್ರೀಕೃಷ್ಣ ಶೆಣೈ, ವಸಂತ ಮರಕಡ, ಸೇವಿಯರ್ ಪಾಲೇಲಿ, ಹತ್ತು ವರ್ಷಕ್ಕಿಂತ ಮೇಲ್ಪಟ್ಟು ೧೫ ವರ್ಷದೊಳಗೆ ಸದಸ್ಯತ್ವ ಹೊಂದಿದ ಅನುಭವವುಳ್ಳ ೩ ಸ್ಥಾನಗಳಿಗೆ ಪ್ರಶಾಂತ್ ಎಂ, ನವೀನ್ ಬಿ.ಕೆ, ಅಸ್ಮಾ, ದಿನೇಶ್, ಧನಂಜಯ ಕುಮಾರ್ ಡಿ, ಮೂರು ವರ್ಷಕ್ಕಿಂತ ಮೇಲ್ಪಟ್ಟು ಹತ್ತು ವರ್ಷಕ್ಕಿಂತ ಒಳಗೆ ಸದಸ್ಯತ್ವ ಹೊಂದಿ ಅನುಭವವುಳ್ಳ ೪ ಸ್ಥಾನಗಳಿಗೆ ಉಷಾ ಎನ್.ಜಿ, ಸಂದೀಪ್ ಡಿ ಸೋಜ, ಲತಾಶ್ರೀ ಎ, ಸೌಮ್ಯ ಪಿ. ಮತ್ತು ಪ್ರಮೀಳಾ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ಬದರಿನಾಥ ಎಂ. ಸಂಪಿಗೆತ್ತಾಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿದಾನಂದ ಪೂಜಾರಿ, ಆನಂದ್ ಕುಮಾರ್ ಎಮ್.ಸಿ. ಮತ್ತು ಜೋಬಿ ಜಾಯ್ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನವೆಂಬರ್ ೧೫ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಹಿಂಪಡೆಯಲು ನ.೧೧ ಕೊನೆಯ ದಿನವಾಗಿದೆ.
