ಬೆಳ್ತಂಗಡಿ: ಕೊಲ್ಲಿ ರಾಷ್ಟ್ರದ ದುಬೈಯ ಗ್ರಾಂಡ್ ಮಿಲೇನಿಯಮ್ ಹೋಟೆಲ್ ನಲ್ಲಿ ದುಬೈ ಬಿಲ್ಲವ ಸಂಘದ 27ನೇ ವರ್ಷದ ಕುಟುಂಬ ಸಮ್ಮಿಲನದ ಆಚರಣೆಯನ್ನು ಅದ್ದೂರಿಯಾಗಿ ದೀಪಕ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ನ. 23ರಂದು ನಡೆಯುವ ಯಾತ್ರಿ ನಿವಾಸದ ಶಿಲನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದುಬೈ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರು ಉದ್ಯಮಿ ಎಸ್. ಆರ್ . ಜಿತೇಂದ್ರ ಸುವರ್ಣ ಬಿಡುಗಡೆಗೊಳಿಸಿದರು.
ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ, ಗೀತಾಂಜಲಿ ಸುವರ್ಣ ಉಡುಪಿ. ಕೃತಿನ್ ಅಮೀನ್ ಮಂಗಳೂರು ಹಾಗೂ ಇತರ ಗಣ್ಯರು ವೇದಿಕೆಯಲ್ಲಿ ಹಾಜರಿದ್ದರು. ಗೆಜ್ಜೆ ಗಿರಿಯ ಯಾತ್ರಿ ನಿವಾಸದ ಉದ್ಘಾಟನೆಯ ಸಂದರ್ಭದಲ್ಲಿ ಹೆಚ್ಚಿನ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ತಿಳಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದ ಕಾರ್ಯಕ್ರಮದಲ್ಲಿ ದುಬೈ ಬಿಲ್ಲವ ಬಂಧುಗಳ ಮತ್ತು ಶೃತಿ ಹೆರಾಜೆ ತಂಡದವರಿಂದ ನೃತ್ಯ ಪ್ರದರ್ಶನ ನೆರೆದಿದ್ದ ಜನರ ಮನ ಸೂರೆಗೊಂಡಿತು.

