ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಹಣಾಧಿಕಾರಿಯವರಾದ ಭವಾನಿಶಂಕರ್ ಎನ್. ಇವರ ಉಪಸ್ಥಿತಿಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸಮಿತಿಯ ಕಛೇರಿಯಲ್ಲಿ ನಡೆಯಿತು.
ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.
ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು, ಚರ್ಚಿಸಲಾಯಿತು. ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ 2025ರ ಸೆಪ್ಟೆಂಬರ್ ತಿಂಗಳಲ್ಲಿ 25593 ಕುಟುಂಬಗಳಿಗೆ 1,33,96,842/- ರೂ, ಬೆಳ್ತಂಗಡಿ ಉಪವಿಭಾಗದಲ್ಲಿ 2025ರ ಜುಲೈ ತಿಂಗಳಲ್ಲಿ 44751 ಕುಟುಂಬಗಳಿಗೆ 2,74,86,419/-ರೂ ಸಹಾಯಧನ ದೊರತಿದ್ದು ತಾಲೂಕಿಗೆ ಈವರೆಗೆ 100,13,99,119/- ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಪ್ರಕೃತ 58798 ಫಲಾನುಭವಿಗಳಿದ್ದು, ಆಗಸ್ಟ್-2023 ರಿಂದ ಈವರೆಗೆ 2,36,88,22,00/-ರೂ ಸಹಾಯಧನ ದೊರೆತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಅನ್ನ ಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ 49312 ಪಡಿತರ ಚೀಟಿದಾರರಿಗೆ 9926.15 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಗಿದೆ. ಪ್ರತೀ ಕೆ.ಜಿ.ಗೆ ರೂಪಾಯಿ 34.00 ರಂತೆ 55,49,55,540.00ರೂಗಳ ಅನುದಾನವು ಆಗಸ್ಟ್-2023 ರಿಂದ ಆಗಸ್ಟ್-2025ರವರೆಗೆ ತಾಲೂಕಿನ ಪಡಿತರ ಚೀಟಿದಾರರಿಗೆ ದೊರೆತಿರುವುದಾಗಿ ಅಧಿಕಾರಿಗಳು ಸಭೆಗೆ ವಿವರ ನೀಡಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6362 ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ 883 ಅಭ್ಯರ್ಥಿಗಳಿಗೆ 2025ರ ಸೆಪ್ಟೆಂಬರ್ ತಿಂಗಳಲ್ಲಿ 22,81,500.00ರೂ.ಗಳನ್ನು ಡಿ.ಬಿ.ಟಿ ಮೂಲಕ ಸಹಾಯಧನವನ್ನು ವಿತರಿಸಲಾಗಿದ್ದು, ಆಗಸ್ಟ್-2023 ರಿಂದ 2025ರ ಸೆಪ್ಟೆಂಬರ್ ತಿಂಗಳವರೆಗೆ 1,65,40,500.00 ರೂ.ಗಳನ್ನು ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.
ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ 2025ರ ಸೆಪ್ಟೆಂಬರ್ ತಿಂಗಳಲ್ಲಿ 707450 ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-2023 ರಿಂದ ಈವರೆಗೆ 30191595 ಪ್ರಯಾಣಿಕರು ಪ್ರಯಾಣಿಸಿದ್ದು, 801459156/-ರೂ. ಬಿಡುಗಡೆಯಾಗಿರುವುದಾಗಿ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಸದಸ್ಯರಾದ ಶೇಖರ್ ಕುಕ್ಕೇಡಿ, ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ಶ್ರೀಮತಿ ವಂದನಾಕುಮಾರಿ, ಶ್ರೀಮತಿ ಸೌಮ್ಯ ಲಾಯಿಲ, ಶ್ರೀಮತಿ ಮೆರಿಟಾ ಪಿಂಟೋ, ವಾಸುದೇವ ರಾವ್, ವಿಜಯಗೌಡ ಬೆಳಾಲು, ಕೇಶವ ನಾಯ್ಕ, ಶರೀಫ್ ಸಬರಬೈಲ್, ಕೆ.ನೇಮಿರಾಜ್ ಕಿಲ್ಲೂರು ಮತ್ತು ವೀರಪ್ಪ ಮೊಯ್ಲಿ ಹಾಗೂ ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸ್ವಿಕ್ವೇರಾ ಇವರು ಉಪಸ್ಥಿತರಿದ್ದರು.

