Site icon Suddi Belthangady

ಬೆಳ್ತಂಗಡಿ: ರೋಟರಿ ಕ್ಲಬ್ ನಿಂದ ದಂಪತಿ ಪಾಕ ಸ್ಪರ್ಧೆ ಮತ್ತು ದೀಪಾವಳಿ ಆಚರಣೆ

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಇತಿಹಾಸದಲ್ಲೇ ಪ್ರಥಮ ಬಾರಿಗೆರೋಟರಿ ಕ್ಲಬ್ ಮತ್ತು ಅದರ ನಾಲ್ಕು ಅಂಗ ಸಂಸ್ಥೆಗಳಾದ ಆರ್.ಸಿ.ಸಿ ಮುಂಡಾಜೆ, ಆರ್.ಸಿ.ಸಿ ನೆರಿಯ, ಆರ್.ಸಿ.ಸಿ ಚಾರ್ಮಾಡಿ- ಕಕ್ಕಿಂಜೆ ಮತ್ತು ಆರ್.ಸಿ.ಸಿ ಕಲ್ಮಂಜ ಸಹಯೋಗದಲ್ಲಿ  ಅ. 19ರಂದು ಸಾರ್ವಜನಿಕರಿಗೆ ದಂಪತಿ ಪಾಕ ಸ್ಪರ್ಧೆ ಮತ್ತು ದೀಪಾವಳಿ ಆಚರಣೆ ನಡೆಸಲಾಯಿತು.  ಸೋಮಂತಡ್ಕದ ಹಿರಿಯ ರೋಟರಿ ಸದಸ್ಯ ಅಡೂರು ವೆಂಕಟ್ರಾಯರ ಒಡೆತನದ ಮೈದಾನದಲ್ಲಿ, ಸಂಜೆ  ಹಂಡೆಗೆ ನೀರು ತುಂಬಿಸುವ ಮೂಲಕ ಅಡೂರು ವೆಂಕಟ್ರಾಯರು ಮತ್ತು ಅವರ ಮಗ ಸುಜಯ್ ನಾಗೇಂದ್ರ ಮತ್ತು ಸೊಸೆ ವಿದ್ಯಾಶ್ರೀ ಅಡೂರು ಅವರು ಚಾಲನೆ ನೀಡಿದರು.

ನಂತರ ನಡೆದ “ದಂಪತಿ ಪಾಕ ಸ್ಪರ್ಧೆ” ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. 2000/- ವನ್ನು ವಿಶಿಕಾ  ಮತ್ತು ಅಭಿಷೇಕ ದಂಪತಿಗಳು, ದ್ವಿತೀಯ ಬಹುಮಾನ ರೂ 1000/- ವನ್ನು ದಿಶಾ ಮತ್ತು ದಿನೇಶ ಪಟವರ್ಧನ, ತೃತೀಯ ಬಹುಮಾನ ರೂ 500/-ಅಶ್ವಿನಿ ಹೆಬ್ಬಾರ ಮತ್ತು ಅರವಿಂದ ಹೆಬ್ಬಾರ ದಂಪತಿಗಳು ಹಾಗೂ ಸಮಾಧಾನಕರ ಬಹುಮಾನವನ್ನು ವೇದಾವತಿ ಮತ್ತು ಶೇಷಪ್ಪ ದಂಪತಿಗಳು ಹಾಗೂ ಶಕುಂತಲ ಮತ್ತು ಗಣೇಶ ದಂಪತಿಗಳು ಪಡೆದರು. ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿ ಪಟಾಕಿ ಹಚ್ಚಿದೀಪಾವಳಿ ಸಂಭ್ರಮಾಚರಣೆ  ನಡೆಸಿದರು.

ಸಭಾ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಅಡೂರು ಪ್ರಾರ್ಥಿಸಿ,  ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ   ಪ್ರೊ. ಪ್ರಕಾಶ ಪ್ರಭು  ಸ್ವಾಗತಿಸಿ, ತಮ್ಮ ಸ್ವರಚಿತ ಕವನವನ್ನು ಹಾಡಿದರು. ರೋಟರಿ ಕ್ಲಬ್ ನ ಆ್ಯನ್ಸ್ ಗಳು  ಮತ್ತು ಆರ್.ಸಿ.ಸಿಯ ಮಹಿಳೆಯರು ರಂಗೋಲಿ ಬಿಡಿಸಿ, ಹಣತೆ ಹಚ್ಚಿದರು. ಅಡೂರು ವೆಂಕಟ್ರಾಯರು ಕಾರ್ಯಕ್ರಮ  ಉದ್ಘಾಟಿಸಿ ದೀಪಾವಳಿಯ ಮಹತ್ವ ತಿಳಿಸಿದರು.

ಮುಖ್ಯ ಅತಿಥಿ ಮುಂಡಾಜೆ  ಸಿಎ ಬ್ಯಾಂಕ್  ಅಧ್ಯಕ್ಷ ಪ್ರಕಾಶ ನಾರಾಯಣ, ವಿದ್ಯಾಶ್ರೀ ಅಡೂರು, ಆರ್.ಸಿ.ಸಿ ಮುಂಡಾಜೆ ಅಧ್ಯಕ್ಷ  ಸೆಬಾಸ್ಟಿಯನ್, ಆರ್.ಸಿ.ಸಿ ನೆರಿಯ ಅಧ್ಯಕ್ಷ ಪಿ.ಕೆ. ರಾಜನ್, ಆರ್.ಸಿ.ಸಿ ಚಾರ್ಮಾಡಿ- ಕಕ್ಕಿಂಜೆ ಅಧ್ಯಕ್ಷೆ ಶಾರದ ಮತ್ತು ಆರ್.ಸಿ.ಸಿ ಕಲ್ಮಂಜದ ಕಾರ್ಯದರ್ಶಿ ದಿನೇಶ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸೆಬೆಸ್ಟಿಯನ್,  ಪಿ.ಕೆ. ರಾಜನ್, ಗೋಪಾಲಕೃಷ್ಣ, ವೆಂಕಟೇಶ ಕಜೆ, ಅರವಿಂದ ಹೆಬ್ಬಾರ, ರಾಕೇಶ, ಓಬಯ್ಯ ಹಾಗೂ ಆ್ಯನ್ ಗೀತಾ ಪ್ರಭು ಅವರಿಗೆ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು ಕೃತಜ್ಞತೆ ಸಲ್ಲಿಸಿದರು. ಅಡೂರು ವೆಂಕಟ್ರಾವ್ ಮನೆಯವರು  ತಯಾರಿಸಿದ ಭೋಜನದೊಂದಿಗೆ, ಮಹಿಳೆಯರೂ ಮನೆಯಲ್ಲಿ ತಯಾರಿಸಿ ತಂದ ಸಿಹಿ/ಖಾರ ಹಾಗೂ ಸ್ಪರ್ಧೆಯಲ್ಲಿ ತಯಾರಿಸಿದ ಸವಿ ಖಾದ್ಯಗಳ ಮಿತ್ರ ಭೋಜನ ನಡೆಯಿತು. ರೇಷ್ಮಾ ಹೆಗ್ಡೆ  ಕಾರ್ಯಕ್ರಮ  ನಿರೂಪಿಸಿದರು. ರೋಟರಿ ಕಾರ್ಯದರ್ಶಿ  ಡಾ. ಎಂ.ಎಂ. ದಯಾಕರ್ ವಂದಿಸಿದರು.

Exit mobile version